ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿನ ಶಾಸಕರ ಅಸಮಾಧಾನ, ಮುನಿಸನ್ನು ತಣಿಸಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು 2ನೇ ದಿನವಾದ ಇಂದೂ ಸಹ ಹಲವು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿ
ಅವರ ಅಹವಾಲುಗಳನ್ನು ಆಲಿಸಿದ್ದು, ಇಂದೂ ಸಹ ಹಲವು ಶಾಸಕರು ಕೆಲ ಸಚಿವರುಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿ ದೂರುಗಳ ಸುರಿಮಳೆ ಗೈದರು.
ಶಾಸಕರ ಆಸಮಾಧಾನ, ಅತೃಪ್ತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಶಾಸಕರೊಂದಿಗೆ ಚರ್ಚೆ ನಡೆಸಲು ನಿನ್ನೆ ರಾಜ್ಯಕ್ಕೆ ಆಗಮಿಸಿ ಶಾಸಕರ ಜತೆ ಸಭೆ ನಡೆಸಿದ್ದ ಸುರ್ಜೆವಾಲಾ ಅವರ ಮುಂದೆ ನಿನ್ನೆಯೂ ಸಹ ಹಲವಾರು ಶಾಸಕರುಗಳು, ಸಚಿವರುಗಳ ವಿರುದ್ಧ ದೂರುಗಳ ಸರಮಾಲೆಯನ್ನೇ ಮುಂದಿಟ್ಟಿದ್ದರು. ಸಚಿವರುಗಳು ತಮಗೆ ಸ್ಪಂದಿಸುತ್ತಿಲ್ಲ. ಅವರಿಗೆ ಬುದ್ಧಿ ಹೇಳಿ ಎಂದು ಒತ್ತಾಯಿಸಿದ್ದರು. ಇಂದೂ ಸಹ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ಶಾಸಕರುಗಳು ದೂರಿನ ಸುರಿಮಳೆಗೈದಿದ್ದು, ಕೆಲ ಸಚಿವರುಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರ ಹಾಕಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ. ಸಚಿವರುಗಳು ನಮ್ಮ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ. ನಮ್ಮ ಪತ್ರಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ಹಲವು ಶಾಸಕರು ಇಂದೂ ಸಹ ಸುರ್ಜೆವಾಲಾ ಅವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ಶಾಸಕರುಗಳ ದೂರು ದುಮ್ಮಾನಗಳನ್ನು ಆಲಿಸಿದ ಸುರ್ಜೇವಾಲಾ ಅವರು ಎಲ್ಲವನ್ನೂ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ, ಹೈಕಮಾಂಡ್ಗೂ ವರದಿ ಕೊಡುತ್ತೇನೆ, ಬಹಿರಂಗವಾಗಿ ಏನನ್ನೂ ಮಾತನಾಡಬೇಡಿ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು ಎಂಬ ಭರವಸೆಯನ್ನೂ ಸುರ್ಜೇವಾಲಾ ಶಾಸಕರಿಗೆ ನೀಡಿದರು ಎನ್ನಲಾಗಿದೆ. ಇಂದು ಸುರ್ಜೇವಾಲಾ ಅವರನ್ನು ಬೆಂಗಳೂರಿನ ಶಾಸಕರುಗಳಾದ ಎನ್. ಎ. ಹ್ಯಾರೀಸ್,ಎಂ. ಕೃಷ್ಣಪ್ಪ, ಪ್ರಿಯಾ ಕೃಷ್ಣ, ಆನೇಕಲ್ ಶಾಸಕ ಶಿವಣ್ಣ, ಎ.ಸಿ. ಶ್ರೀನಿವಾಸ್, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಮಾಲೂರಿನ ಶಾಸಕ ಕೆ.ವೈ. ನಂಜೇಗೌಡ, ಚಿಕ್ಕಮಗಳೂರಿನ ಶಾಸಕ ತಮ್ಮಯ್ಯ, ತರೀಕೆರೆ ಶಾಸಕ ಶಿವಶಂಕರ್, ರಾಮನಗರಿ ಶಾಸಕ ಇಕ್ಬಾಲ್ ಹುಸೇನ್, ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ, ಚನ್ನಪಟ್ಟಣ ಶಾಸಕ ಯೋಗೇಶ್ವರ್ ಸೇರಿದಂತೆ ಹಲವು ಶಾಸಕರು ಭೇಟಿಯಾಗಿ ತಮ್ಮ ಅಹವಾಲುಗಳನ್ನು ಹಾಗೂ ರಾಜ್ಯ ಸರ್ಕಾರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ನಿನ್ನೆ ಕೋಲಾರ, ಚಿಕ್ಕಬಳ್ಳಾಪುರ ಕೈ ಶಾಸಕರು ಹಾಗೂ ವಸತಿ ಇಲಾಖೆಯ ಲಂಚಾವಾತಾರದ ಬಗ್ಗೆ ಪ್ರಶ್ನೆಗೆ ಬಿ.ಆರ್. ಪಾಟೀಲ್ ಸೇರಿದಂತೆ ಹಲವು ಶಾಸಕರನ್ನು ಭೇಟಿ ಮಾಡಿದ್ದ ಸುರ್ಜೇವಾಲಾ ಅವರು, ಇಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಮಗಳೂರು ಜಿಲ್ಲೆಗಳ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿ ಅವರ ಅಹವಾಲು ಆಲಿಸಿದರು. ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಪ್ರತ್ಯೇಕವಾಗಿಯೇ ಪ್ರತಿ ಶಾಸಕರನ್ನು ಭೇಟಿ ಮಾಡಿ ಸಚಿವರುಗಳ ಕಾರ್ಯವೈಖರಿ ಸರ್ಕಾರದ ಆಡಳಿತದ ಬಗ್ಗೆ ಶಾಸಕರಿಗೆ ಇರುವ ಅಭಿಪ್ರಾಯ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಎರಡು ವರ್ಷಗಳಲ್ಲಿ ಶಾಸಕರ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು, ಸಿಕ್ಕಿರುವ ಅನುದಾನ ಎಲ್ಲದರ ಬಗ್ಗೆಯೂ ಮಾಹಿತಿಗಳನ್ನು ಪಡೆದುಕೊಂಡರು.