ಬೆಂಗಳೂರು ; ಮಂಗಳೂರು ಮಹಾನಗರ ಪಾಲಿಕೆ ಸೇರಿ ಮೈಸೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಮಹಾನಗರ ಪಾಲಿಕೆಗಳ ಅವಧಿ ಈ ತಿಂಗಳು ಮುಗಿಯಲಿದ್ದು 5 ಮಹಾನಗರ ಪಾಲಿಕೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದೆ ಎಂಬ ಮಾಹಿತಿ ದೊರೆತಿದೆ.
ಈ ವರ್ಷದ ಎಪ್ರಿಲ್ – ಮೇ ನಲ್ಲಿ ಜಿಲ್ಲಾ ಪಂಚಾಯತ್ – ತಾಲೂಕು ಪಂಚಾಯತ್ ಗಳಿಗೆ ಚುನಾವಣೆ ನಡೆಸಲು ಆಯೋಗ ಸಿದ್ದವಾಗಿದ್ದರೂ ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿ ಕೊಡಲು ಸರಕಾರ ಮೀನಮೇಷ ಎಣಿಸುತ್ತಿರುವುದರಿಂದ ರಾಜ್ಯ ಚುನಾವಣಾ ಆಯೋಗ ಕಾದು ಸುಸ್ತಾಗಿದ್ದು ಕೊನೆಗೂ ಮಾರ್ಚ್- ಎಪ್ರಿಲ್ ನಲ್ಲಿ ರಾಜ್ಯದ 5 ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಜಿ.ಪಂ., ತಾ.ಪಂ. ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿ ನೀಡಲು ಸರಕಾರ ವಿಳಂಬ ಮಾಡಿದ್ದು ಹಲವು ಜಿಲ್ಲೆಗಳಲ್ಲಿ ರಾಜ್ಯಸರಕಾರ ಅಯೋಗಕ್ಕೆ ಮೀಸಲಾತಿ ಪಟ್ಟಿ ಕಳುಹಿಸದೆ ಇದ್ದುದ್ದರಿಂದ ಅವಧಿ ಮುಗಿದ ಹಿನ್ನೆಲೆ ಅಯೋಗ ಚುನಾವಣೆ ನಡೆಸಲು ಮುಂದಾಗಿದೆ ಎಂದು ತಿಳಿದಿದೆ.
ಮಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ ದಾವಣಗೆರೆ ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಶಿವಮೊಗ್ಗ ಮೈಸೂರು ಮಹಾನಗರ ಪಾಲಿಕೆಗಳಿಗೆ 2018ರ ಆಗಸ್ಟ್ನಲ್ಲಿ ಚುನಾವಣೆ ನಡೆದಿದ್ದು, ಅವುಗಳ ಅವಧಿ 2023ರ ನವೆಂಬರ್ನಲ್ಲಿ ಮುಗಿದಿತ್ತು. ತುಮಕೂರು ಮನಪಾ ಅವಧಿ 2024ರ ಜನವರಿಯಲ್ಲಿ ಮುಗಿದಿತ್ತು. ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರಕಾರವು ಆಯೋಗಕ್ಕೆ ಕಳುಹಿಸಬೇಕು. ಆದರೆ ಸರಕಾರದಿಂದ ಈವರೆಗೆ ಮೀಸಲಾತಿ ಪಟ್ಟಿ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಟ್ಟಿಗೆ ಕಾಯದೆ ಈಗಿರುವ ಮೀಸಲಾತಿಯಂತೆ ರಾಜ್ಯದ 5 ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಹೊರ ವಲಯದ ಬೊಮ್ಮನಹಳ್ಳಿ ಅತ್ತಿಬೆಲೆ ಪುರಸಭೆಗಳಿಗೆ ಮಾರ್ಚ್ ಅಥವಾ ಎಪ್ರಿಲ್ ನಲ್ಲಿ ಚುನಾವಣೆ ನಡೆಸಲು ಯೋಜಿಸಲಾಗಿದೆ. ಜಿ.ಎಸ್. ಸಂಗ್ರೇಶಿ, ರಾಜ್ಯ ಚುನಾವಣ ಆಯುಕ್ತರು ತಿಳಿಸಿದ್ದಾರೆ. ಉಳಿದಂತೆ ಮಂಗಳೂರು, ದಾವಣಗೆರೆ ಮಹಾನಗರ ಪಾಲಿಕೆಗಳ ಅವಧಿ ಈ ತಿಂಗಳು ಮುಗಿಯಲಿದೆ. ಇವೆರಡರ ಮೀಸಲಾತಿ ಪಟ್ಟಿ ಬಗ್ಗೆಯೂ ಈವರೆಗೆ ಯಾವುದೇ ಮಾಹಿತಿ ಇಲ್ಲ, ಆದ್ದರಿಂದ ಎಲ್ಲ 5 ಮಹಾನಗರ ಪಾಲಿಕೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದೆ.