ಬೆಂಗಳೂರು : ಕಳೆದ ತಿಂಗಳ ಹಿಂದೆ ಸುರಿದ ಭಾರಿ ಮಳೆಯ ಹಿನ್ನೆಲೆ ರಾಜ್ಯದಲ್ಲಿ ಅಲ್ಲಲ್ಲಿ ಭೂಕುಸಿತ ಉಂಟಾಗಿ ಇಲ್ಲಿಯವರೆಗೆ ಹಲವು ಜನರು ಸಾವನ್ನಪ್ಪಿದ್ದರು. ಈ ಹಿನ್ನೆಲೆ ರಾಜ್ಯದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಯ ಹಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿತ್ತು ಹಲವು ದಿನಗಳ ಬಳಿಕ ನಿರ್ಬಂಧ ತೆರವುಗೊಳಿಸಿದ್ದು ಇದೀಗ ರಾಜ್ಯದ ಎಲ್ಲ ಚಾರಣ ಕೈಗೊಳ್ಳುವ ಸ್ಥಳಗಳಿಗೆ ಒಂದೇ ವೇದಿಕೆಯಲ್ಲಿ ಟಿಕೆಟ್ ಖರೀದಿಸುವ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಆರಂಭಿಸಿದ ಅರಣ್ಯ ವಿಹಾರ ವೆಬ್ಸೈಟ್ಗೆ ಇಂದು ಚಾಲನೆ ನೀಡಲಾಗಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ವಿಕಾಸ ಸೌಧದಲ್ಲಿ ಅರಣ್ಯ ವಿಹಾರ ವೆಬ್ಸೈಟ್ ಲೋಕಾರ್ಪಣೆ ಮಾಡಿದ್ದು ಇದರಲ್ಲಿ ಒಂದು ಬಾರಿಗೆ 300 ಜನರಿಗೆ ಅವಕಾಶ ಸಿಗಲಿದ್ದು, ಸಂಚಾರ ದಟ್ಟಣೆ ಸೇರಿ ವಿವಿಧ ಕಾರಣಕ್ಕೆ ಮಿತಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಐದು ಚಾರಣ ಪಥ ಇದೆ. ಇನ್ನೂ 18 ಚಾರಣ ಪಥ ಆಗಬೇಕು. ರಾಜ್ಯದಲ್ಲಿ 40 ಚಾರಣ ಪಥ ಗುರುತಿಸಬಹುದು. ಎಲ್ಲಾ ಚಾರಣ ಪ್ರದೇಶಗಳಿಗೆ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು 40 ಲಕ್ಷ ರೂ. ಮೊತ್ತದಲ್ಲಿ ಅಂತರ್ಜಾಲ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಹಲವು ಕಡೆ ನಕಲಿ ಟಿಕೆಟ್ ಮಾರಾಟ ಆಗುತ್ತಿತ್ತು. ಬ್ಲ್ಯಾಕ್ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ ಎಂದು ದೂರು ಬಂದ ಹಿನ್ನೆಲೆ ಪರಿಸರ ಪ್ರವಾಸೋದ್ಯಮದ ಕಾರಣದಿಂದ ಅರಣ್ಯಕ್ಕೆ ಧಕ್ಕೆಬಾರದ ರೀತಿಯಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸುಬ್ರಹ್ಮಣ್ಯ-ಕುಮಾರ ಪರ್ವತ, ಬೀದಳ್ಳಿಯಿಂದ-ಕುಮಾರ ಪರ್ವತ, ತಲಕಾವೇರಿಯಿಂದ-ನಿಶಾನಿ ಮೊಟ್ಟೆ , ಚಾಮರಾಜನಗರದಿಂದ-ನಾಗಮಲೈಗೆ ಈ ವೆಬ್ಸೈಟ್ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ. ಬಾಬಾಬುಡನಗಿರಿ ಸೇರಿ 23 ಕಡೆ ಚಾರಣ ಪಥ ನಡೆಯುತ್ತಿತ್ತು.ಈ ಹಿಂದೆ ಅನೇಕ ಕಡೆ ಚಾರಣ ಪಥ ದಲ್ಲಿ ಅವಘಡ ನಡೆದಿತ್ತು. ಹೀಗಾಗಿ ಐದು ಚಾರಣ ಪಥಕ್ಕೆ ಆನ್ಲೈನ್ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೇಳಿದರು.ದೊಡ್ಡ ಚಾರಣಕ್ಕೆ 350+ ಜಿಎಸ್ಟಿ, ಸಣ್ಣ ಚಾರಣಕ್ಕೆ 250+ ಜಿಎಸ್ಟಿ ರೂ. ದರ ನಿಗದಿ ಮಾಡಲಾಗಿದ್ದು ಒಂದು ಟೀಂನಲ್ಲಿ 10 ಜನರು ಇರಬಹುದು, ಗುಂಪಿನ ನಾಯಕ ಬುಕ್ ಮಾಡಿದರೆ ಆತನ ಮೊಬೈಲಿಗೆ ಬುಕ್ಕಿಂಗ್ ಒಟಿಪಿ ಬರುತ್ತದೆ ಹಾಗೂ ಚಾರಣಕ್ಕೆ ತೆರಳುವ ಎರಡು ದಿನಗಳ ಮುನ್ನ ಬುಕ್ ಮಾಡಬೇಕು. 48 ಗಂಟೆ ಮುಂಚಿತವಾಗಿ ಟಿಕೆಟ್ ರದ್ದು ಮಾಡಬಹುದು. ರದ್ದು ಮಾಡಿದರೆ 75% ಟಿಕೆಟ್ ಹಣ ಮರುಪಾವತಿ ಆಗಲಿದೆ ಎಂದು ತಿಳಿಸಿದ್ದಾರೆ.
ಅರಣ್ಯ ವಿಹಾರ ವೆಬ್ಸೈಟ್ಗೆ ಭೇಟಿ ನೀಡಲು ಕ್ಲಿಕ್ ಮಾಡಿ : www.aranyavihaara.karnataka.gov.in


