ಧಾರವಾಡ : ಮಕ್ಕಳು ಎಂದರೆ ಕಾಡುವುದು-ಬೇಡುವುದು, ಅಳುವುದು-ಕರೆಯುವುದು ಇದ್ದದ್ದೆ. ಆದರೆ ಇಲ್ಲೊಬ್ಬ ತಂದೆ ಕುಡಿದು ಬಂದಾಗ ಮಗು ಅಳುತ್ತದೆ ಎಂಬ ಕಾರಣಕ್ಕೆ ತಲೆಯನ್ನು ನೆಲಕ್ಕೆ ಜಜ್ಜಿ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಹೊರ ಜಗತ್ತಿನಲ್ಲಿ ಎಷ್ಟೇ ಕಷ್ಟ, ನೋವುಗಳನ್ನು ಅನುಭವಿಸಿದರೂ ಮನೆಗೆ ಹೋದಾಗ ಮಕ್ಕಳ ಮುಖ ನೋಡಿದರೆ ಎಲ್ಲ ನೋವುಗಳು ಮಾಯವಾಗುತ್ತವೆ ಎನ್ನುವುದು ಬಹುತೇಕ ಪಾಲಕರ ಅಭಿಪ್ರಾಯ. ಆದರೆ ಇದಕ್ಕೆ ವಿರುದ್ಧ ಎನ್ನುವಂತೆ ಈ ರಾಕ್ಷಸಿ ಅಪ್ಪ ವರ್ತಿಸಿದ್ದಾನೆ. ಕುಡಿದು ಬಂದಾಗ ನೆಮ್ಮದಿಯಿಂದ ಮಲಗಲು ಮಗು ಬಿಡುವುದಿಲ್ಲ, ಬರೀ ಅಳುವುದನ್ನೇ ಮಾಡುತ್ತದೆ ಎಂದು ಸಿಟ್ಟಿಗೆದ್ದು ಹೆತ್ತ ಕರುಳ ಬಳ್ಳಿಯನ್ನೇ ಎತ್ತೆಂದರತ್ತ ಬಿಸಾಡಿದ್ದಾನೆ. ಕೊನೆಗೆ ತಲೆ ಕೆಳಗೆ ಮಾಡಿ ನೆಲಕ್ಕೆ ಜಜ್ಜಿ ಕೊಲೆ ಮಾಡಿ ರಾಕ್ಷಸನಂತೆ ವರ್ತಿಸಿದ್ದಾನೆ.
ಈ ಘಟನೆ ನಡೆದಿದ್ದು ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ. ೪೪ ವರ್ಷದ ಶಂಭುಲಿಂಗಯ್ಯ ಶಾಪುರಮಠ ಎಂಬಾತನೇ ಇಂಥ ರಾಕ್ಷಸ ಅಪ್ಪ. ಈತ ವಿಪರೀತ ಮದ್ಯದ ಚಟಕ್ಕೆ ಒಳಗಾಗಿದ್ದ. ಒಂದು ವರ್ಷದ ಹಿಂದೆ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಮಗುವನ್ನು ಅತ್ಯಂತ ಪ್ರೀತಿಯಿಂದಲೇ ಮನೆಯವರೆಲ್ಲರೂ ನೋಡಿಕೊಳ್ಳುತ್ತಿದ್ದರು. ಆದರೆ ಶಂಭುಲಿAಗಯ್ಯನಿಗೆ ಮಾತ್ರ ಮಗು ಅಳುವುದನ್ನು ಕೇಳಲು ಆಗುತ್ತಿರಲಿಲ್ಲ. ನಿತ್ಯ ರಾತ್ರಿ ಮನೆಗೆ ಕುಡಿದು ಬಂದಾಗ ಮಗು ಅಳುತ್ತಿದ್ದರೆ ಅದನ್ನೇ ನೆಪ ಮಾಡಿಕೊಂಡು ಪತಿ-ಪತ್ನಿ ಜಗಳಾಡುತ್ತಿದ್ದರು. ಇದು ಬುಧವಾರ ರಾತ್ರಿ ವಿಕೋಪಕ್ಕೆ ತಿರುಗಿದೆ. ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾನೆ.
ತಕ್ಷಣ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಗುರುವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದೆ. ಈ ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಾಪಿ ತಂದೆಯನ್ನು ಬಂಧಿಸಲಾಗಿದೆ.


