ಚಿತ್ರದುರ್ಗ : ಸ್ಟಾರ್ಟ್ ಅಪ್ ಕಂಪನಿಯ ಸಿಇಓ ಸುಚನಾ ಸೇಠ್ ತನ್ನ ಮಗುವನ್ನು ಕೊಲೆಮಾಡಿದ ಸುದ್ದಿ ಇಡೀ ರಾಜ್ಯವೇ ಬೆಚ್ಚಿಬೀಳುವಂತಹದ್ದಾಗಿದೆ.ಮಗನನ್ನೇ ಹತ್ಯೆಮಾಡಿ ಶವವನ್ನು ಸೂಟ್ಕೇಸ್ನಲ್ಲಿ ತುಂಬಿಸಿ ಗೋವಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದಾಗ ಆರೋಪಿ ಮಹಿಳೆ ಸುಚನಾ ಸೇಠ್ ಚಿತ್ರದುರ್ಗದಲ್ಲಿ ಸಿಕ್ಕಿಬಿದ್ದಿದ್ದಳು. ಪತಿ ವೆಂಕಟರಮಣ ತನ್ನ ನಾಲ್ಕು ವರ್ಷದ ಮಗನನ್ನು ಭೇಟಿಯಾಗಬಾರದು ಹಾಗೂ ಪ್ರತಿ ಶನಿವಾರ ವಿಡಿಯೋ ಕಾಲ್ ಮೂಲಕ ನೋಡಬಾರದೆಂಬ ಉದ್ದೇಶದಿಂದ ಏನು ತಿಳಿಯದ ಪುಟ್ಟ ಕಂದನ ಹತ್ಯೆಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಮಗುವಿನ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಹತ್ಯೆಯ ಭೀಕರತೆಯನ್ನು ವೈದ್ಯಾಧಿಕಾರಿ ತಿಳಿಸಿದ್ದಾರೆ,ಹಿರಿಯೂರು ತಾಲೂಕಿನ ಆಸ್ಪತ್ರೆ ಶವಾಗಾರದಲ್ಲಿ ಡಾ.ಕುಮಾರ ನಾಯ್ಕ್, ಡಾ.ರಂಗೇಗೌಡರು ಮರಣೋತ್ತರ ಪರೀಕ್ಷೆ ನಡೆದಿದ್ದು ಬಳಿಕ ವೈದ್ಯಾಧಿಕಾರಿ ಮಾತನಾಡಿ ಹೇಳಿದ ಅವರು 36 ಗಂಟೆಗಳ ಹಿಂದೆಯೇ ಮಗುವಿನ ಹತ್ಯೆಯಾಗಿದೆ. ಕೈಯಿಂದ ಕತ್ತು ಹಿಸುಕಿ ಹತ್ಯೆ ಮಾಡಿಲ್ಲ. ತಲೆ ದಿಂಬು ಅಥವಾ ಬೇರೆ ವಸ್ತು ಬಳಸಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಉಸಿರುಗಟ್ಟಿಸಿದ ಕಾರಣ ಮಗುವಿನ ಮುಖ, ಎದೆಭಾಗ ಊದಿಕೊಂಡಿದೆ. ಹೀಗಾಗಿ ಮಗುವಿನ ಮೂಗಿನಿಂದ ರಕ್ತಸ್ರಾವವಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಮಾತನಾಡಿದ ಕೊಲೆಗೀಡಾಗಿರುವ ಬಾಲಕನ ತಂದೆ ವೆಂಕಟರಮಣ ಸಂಬಂಧಿ, ವೆಂಕಟರಮಣ ತುಂಬಾ ನೋವಿನಲ್ಲಿದ್ದಾರೆ, ಒಂಟಿಯಾಗಿರಲು ಬಿಟ್ಟುಬಿಡಿ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ನಮಗೇನು ಗೊತ್ತಿಲ್ಲ ಎಂದಿದ್ದಾರೆ.


