ಗಂಗಾವತಿ : ನಗರದ ಸಿದ್ದಿಕೇರಿಯ ಜನವಸತಿ ಪ್ರದೇಶ ಸನೀಹದಲ್ಲಿರುವ ಮಾರೆಮ್ಮ ಗುಡಿ ಹತ್ತಿರದ ಬೆಟ್ಟದಲ್ಲಿ ಗುರುವಾರ ಬೆಳಗಿನ ಸಮಯದಲ್ಲಿ ಚಿರತೆಗಳ ಜೋಡಿಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ಸಿದ್ದಿಕೇರಿಯ ಬೇಡರ ಕಣ್ಣಪ್ಪ ವೃತ್ತದ ಬಳಿ ಇರುವ ಮಾರೆಮ್ಮ ಗುಡಿಯ ಸಮೀಪ ಇರುವ ಬೆಟ್ಟದಲ್ಲಿ ಚಿರತೆಗಳ ಚಲನಾ-ವಲನವನ್ನು ರೈತ ರಾಜೇಶ ಚಳ್ಳೂರು ಹಾಗೂ ರಾಜೇಶ ನಾಯಕ ದೊರೆ ಎಂಬುವವರು ಗಮನಿಸಿದ್ದು, ತಮ್ಮ ಮೊಬೈಲ್ನಲ್ಲಿ ಚಿರತೆಗಳ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಬೆಟ್ಟದ ಬಂಡೆಯ ಮೇಲೆ ಸುಮಾರು ಹತ್ತು ನಿಮಷಕ್ಕೂ ಹೆಚ್ಚು ಕಾಲ ಚಿರೆಗಳು ಓಡಾಡಿವೆ. ಚಿರತೆಗಳನ್ನು ಕಂಡ ಪಕ್ಷಗಳು ಕಿರುಚುತ್ತಿರುವುದನ್ನು ಗಮನಿಸಿದ ರೈತ ರಾಜೇಶ ಚಳ್ಳೂರು ಬೆಟ್ಟದತ್ತ ದೃಷ್ಟಿ ನೆಟ್ಟಾಗ ಚಿರತೆಗಳು ವಿಹಾರ ಮಾಡುತ್ತಿರುವುದು ಕಂಡಿದೆ.
ಮಾರೆಮ್ಮ ದೇವಸ್ಥಾನದ ಸುತ್ತಲೂ ಜನ ವಸತಿ ಪ್ರದೇಶವಿದ್ದು, ಸುತ್ತಲೂ ಹೊಲ-ಗದ್ದೆಗಳಿವೆ. ಜನ ಮತ್ತು ಜಾನುವಾರುಗಳ ನಿರಂತರ ಓಡಾಟವಿರುತ್ತದೆ. ಚಿರತೆಗಳು ಪ್ರತ್ಯಕ್ಷವಾಗಿದ್ದರಿಂದ ಜನ-ಜಾನುವಾರುಗಳ ಸಹಜ ಸಂಚಾರಕ್ಕೆ ಆತಂಕ ಎದುರಾದಂತಾಗಿದೆ.
ಕೂಡಲೆ ಅರಣ್ಯ ಇಲಾಖೆಯ ಸಿಬ್ಬಂದಿ ಬೋನುಗಳನ್ನಿಟ್ಟು ಚಿರತೆಗಳನ್ನು ಸೆರೆ ಹಿಡಿಯಬೇಕು. ಬಳಿಕ ಸುರಕ್ಷಿತ ಪ್ರದೇಶಕ್ಕೆ ಬಿಡಬೇಕು’ ಎಂದು ಸ್ಥಳೀಯರಾದ ಲಿಂಗಪ್ಪ ಚಳ್ಳೂರು, ಸಿಂಗಾಪುರ ಶ್ರೀನಿವಾಸ, ಹೊನ್ನೂರಪ್ಪ, ಹನುಮಂತ ಮೊದಲಾದ ರೈತರು ಒತ್ತಾಯಿಸಿದ್ದಾರೆ.


