ಗಂಗಾವತಿ : ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ನನಗಾದ ನಂಬಿಕೆ ದ್ರೋಹ, ವಂಚನೆ ನಮ್ಮದೇ ಪಕ್ಷದ ನಾಯಕರು ಹೆಣೆದ ಷಡ್ಯಂತ್ರ ಜಾಲದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಳೆಎಳೆಯಾಗಿ ವಿವರಿಸಲಾಗಿದೆ ಎಂದು ಮಾಜಿಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.
ಈ ಬಗ್ಗೆ ಶನಿವಾರ ರಾತ್ರಿ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕನಕಗಿರಿ ಉತ್ಸವಕ್ಕೆ ಬಂದಿದ್ದ ಸಿಎಂ ಸಿದ್ದರಾಮಯ್ಯ ತಮ್ಮ ನಿವಾಸಕ್ಕೆ ಬರುವ ಮಾರ್ಗ ಮಧ್ಯದಲ್ಲಿ ಅವರದ್ದೇ ವಾಹನದಲ್ಲಿ ಬಂದಿದ್ದ ನಾನು, ಕಳೆದ ಚುನಾವಣೆಯ ಸಂದರ್ಭದಲ್ಲಿ ಯಾರೆಲ್ಲಾ ವಂಚನೆ ಮಾಡಿದ್ದಾರೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಿಎಂ ಗಮನಕ್ಕೆ ತಂದಿರುವೆ. ನನ್ನ ಜೊತೆಗಿದ್ದು ವಂಚನೆ ಮಾಡಿದವರು, ನಾನು ಬೆಳೆಸಿದವರೆ ಮೇಲ್ನೋಟಕ್ಕೆ ನಮ್ಮ ಪಕ್ಷದಲ್ಲಿದ್ದಂತಿದ್ದು ಒಳಗೊಳಗೆ ರೆಡ್ಡಿಗೆ ಬೆಂಬಲ ಮಾಡಿರುವುದೂ ಸೇರಿದಂತೆ ಜಿಲ್ಲೆಯ ಕೆಲ ಕಾಂಗ್ರೆಸ್ ನಾಯಕರು ಮಾಡಿರುವ ವಂಚನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ಅನ್ಸಾರಿ ಹೇಳಿದರು.
ಹತ್ತು ಕಚೇರಿ ಆರಂಭವಾಗಲಿ:
ನಗರದ ಬೈಪಾಸ್ ರಸ್ತೆಯಲ್ಲಿ ಕೆಲವರು ಕಾಂಗ್ರೆಸ್ ಕಚೇರಿ ಆರಂಭಿಸುತ್ತಿರುವ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ, ಒಂದಲ್ಲ ಇನ್ನು ಹತ್ತು ಅಂಥಹ ಕಚೇರಿ ಆರಂಭಿಸಿದರೂ ನನಗೇನು ಹಾನಿಯಿಲ್ಲ. ಅವೆಲ್ಲ ಮೇಲ್ನೋಟಕ್ಕೆ ಕಾಂಗ್ರೆಸ್ ಕಚೇರಿ ಎಂದು ಕೆಯಿಸಿಕೊಳ್ಳುತ್ತವೆ.
ಆದರೆ ಅಲ್ಲಿ ಎಲ್ಲರೂ ಕೆಆರ್ಪಿಪಿ ಪಕ್ಷದವರು ಇರುತ್ತಾರೆ ಎಂದು ವ್ಯಂಗ್ಯೆವಾಡಿದ ಅನ್ಸಾರಿ, ಕಾಂಗ್ರೆಸ್ ಪಕ್ಷ ಏನಿದ್ದರೂ ಅನ್ಸಾರಿಯಿಂದ ಸಂಘಟನೆಯಾಗುತ್ತದೆ. ಅನ್ಸಾರಿಯನ್ನು ಮಾತ್ರ ಪಕ್ಷದ ಕಾರ್ಯಕರ್ತರು ನಂಬುತ್ತಾರೆ ಎಂದರು.
2023ರ ಚುನಾವಣೆಯಲ್ಲಿ ಹಣೆಬರಹ ಸರಿಯಿದ್ದರೂ ನಮ್ಮದೇ ಪಕ್ಷದ ಕೆಲ ನಾಯಕರಿಂದ ನನಗೆ ಸೋಲಾಗಿದೆ. ಇದರಿಂದ ದೃತಿಗೆಡುವ ಪ್ರಶ್ನೆ ಇಲ್ಲ. ಅನ್ಸಾರಿಯದ್ದು ಮತ್ತೆ ಪುಟಿದೇಳುವ ಮನಸ್ಥಿತಿ. ಕಾಲ ಎಲ್ಲವೂ ಒಂದೇ ತೆರನಾಗಿರುವುದಿಲ್ಲ. ಕಾಲಚಕ್ರ ಉರುಳುತ್ತಲೆ ಇರುತ್ತದೆ ಎಂದು ಅನ್ಸಾರಿ ಹೇಳಿದರು.


