ಗಂಗಾವತಿ : ಸಹದ್ಯೋಗಿ ಯುವತಿಯನ್ನು ಪ್ರವಾಸಕ್ಕೆಂದು ಕರೆತಂದು ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ನಿದ್ರೆಯ ಮಂಪರಿನಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಅತಚಾರ ಮಾಡಿದ ಇಬ್ಬರು ಕಿರಾತಕರಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ 20 ವರ್ಷ ಕಠೀಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2015ರಲ್ಲಿ ನಡೆದ ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ, ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳಿಗೆ ತಲಾ ಮೂರು ಲಕ್ಷ ರೂಪಾಯಿ ದಂಡ ಮತ್ತು 20 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ದಂಡ ಪಾವತಿಯಲ್ಲಿ ವಿಫಲವಾದರೆ ಹೆಚ್ಚುವರಿ ಐದು ವರ್ಷ ಸಜೆ ವಿಧಿಸಲಾಗಿದೆ.
ಆರೋಪಿಗಳನ್ನು ಉತ್ತರ ಪ್ರದೇಶದ ಫಾರೂಕಾಬಾದ್ನ ಸಾಫ್ಟ್ವೇರ್ ಎಂಜಿನಿಯರ್ ರೋಹಿತ್ ಪ್ರಮೋದ್ ಮಂಗಲಿಕ್ ಮತ್ತು ರಾಜಸ್ತಾನದ ಸಿಕ್ಕರ್ ಜಿಲ್ಲೆಯ ರಾಜಕುಮಾರ ಮದನಾಲ್ ಸೈನಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಪಶ್ಚಿಮ ಬಂಗಾಳದ ಸಂತ್ರಸ್ತ ಯುವತಿ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿವರ:
ಹೈದ್ರಾಬಾದಿನ ಡಿ.ಇ ಮತ್ತು ಶಾ ಎಂಬ ಕಂಪನಿಯಲ್ಲಿ ಈ ಸಂತ್ರಸ್ತ ಮಹಿಳೆಯೊಂದಿಗೆ ಈ ಇಬ್ಬರು ಯುವಕರು ಕೆಲಸ ಮಾಡುತ್ತಿದ್ದರು. 2015ರಲ್ಲಿ ಪ್ರವಾಸಕ್ಕೆಂದು ಗಂಗಾವತಿ ತಾಲ್ಲೂಕಿನ ಆನೆಗೊಂದಿ ಹೋಬಳಿಯ ವಿರುಪಾಪುರ ಗಡ್ಡೆಗೆ ಕರೆತಂದ ಈ ಯುವಕರು, ಹೇಮಾ ಗೆಸ್ಟ್ ಹೌಸ್ ಎಂಬಲ್ಲಿ ರೂಂ ಬಾಡಿಗೆ ಪಡೆದುಕೊಂಡಿದ್ದರು.
ರಾತ್ರಿ ಪಾರ್ಟಿ ಮಾಡುವ ಸಂದರ್ಭದಲ್ಲಿ ಯುವತಿ ಸೇವಿಸುತ್ತಿದ್ದ ತಂಪು ಪಾನೀಯದಲ್ಲಿ ಆಕೆಗೆ ಗೊತ್ತಾಗದಂತೆ ಮತ್ತು ಬರಿಸುವ ಮಾದಕ ದ್ರವ್ಯ ಸೇರಿಸಿ ಕುಡಿಸಿದ್ದಾರೆ. ಬಳಿಕ ಆಕೆ ನಿದ್ರೆಗೆ ಶರಣಾಗಿದ್ದಾಳೆ. ಬಳಿಕ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ಆರೋಪಿಸಿ ದೂರು ದಾಖಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ ಗಂಗಾವತಿ ಗ್ರಾಮೀಣ ಠಾಣೆಯ ಅಂದಿನ ಸಿಪಿಐ ಪ್ರಭಾಕರ ಧರ್ಮಟ್ಟಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯ ಪರವಾಗಿ ಸರಕಾರಿ ಅಭಿಯೋಜಕಿ ಎಸ್. ನಾಗಲಕ್ಷ್ಮಿ ವಾದ ಮಂಡಿಸಿದ್ದರು.


