ಕೋಲಾರ : ಲೋಕಸಭಾ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಚುನಾವಣಾ ಕಣ್ಗಾವಲು ತಂಡ, ಕೋಲಾರ ಜಿಲ್ಲೆಯ ರಾಮಸಂದ್ರ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರು ತಡೆದು ತಪಾಸಣೆಗೆ ಒಳಪಡಿಸಿದ ಪ್ರಸಂಗ ಭಾನುವಾರ ರಾತ್ರಿ ನಡೆದಿದೆ.
ಕೋಲಾರ ನಗರದ ಹೊರಭಾಗದಲ್ಲಿರುವ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುತ್ತಿದ್ದ ಸಿದ್ದರಾಮಯ್ಯ ಅವರ ಕಾರನ್ನು ಕೋಲಾರ ಜಿಲ್ಲೆಯ ಅಂಚಿನಲ್ಲಿ ಸ್ಥಾಪಿಸಲಾದ ರಾಮಸಂದ್ರ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆಗೆ ಒಳಪಡಿಸಿದರು.
ಇದಕ್ಕೆ ಕಿಂಚಿತ್ತೂ ಬೇಸರಿಸಿಕೊಳ್ಳದ ಸಿದ್ದರಾಮಯ್ಯ, ತಪಾಸಣೆಗೆ ಸಂಪೂರ್ಣ ಸಹಕಾರ ನೀಡಿದರು. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್.ಸುರೇಶ್ ಅವರು ಜೊತೆಗಿದ್ದರು. ಪ್ರತಿ ವಾಹನವನ್ನು ಸಮಗ್ರವಾಗಿ ತಪಾಸಣೆಗೆ ಒಳಪಡಿಸಬೇಕು ಎಂಬ ಆದೇಶದ ಮೇರೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು.
ಬಳಿಕ ಅವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಬೆಂಗಳೂರಿಗೆ ತೆರಳಿದರು.


