ಕುರುಗೋಡು : ಬಾದನಹಟ್ಟಿ ಗ್ರಾಮದಿಂದ ಬಳ್ಳಾರಿಗೆ ಬೆಳಿಗ್ಗೆ ತೆರಳುವ ಸಾರಿಗೆ ಬಸ್ ತಡವಾಗಿ ಬರುವುದನ್ನು ಖಂಡಿಸಿ ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ಆಗ್ರಹಿಸಿ ಬಾದನಹಟ್ಟಿ ಗ್ರಾಮದಲ್ಲಿ ಸೋಮವಾರ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ವಿದ್ಯಾರ್ಥಿ ಶಂಕರಗೌಡ,ಶಿವರಾಜ್, ಬಸವರಾಜ್ ಮಾತನಾಡಿ, ಬಾದನಹಟ್ಟಿ ಗ್ರಾಮದಲ್ಲಿ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ನಿತ್ಯ ಬಳ್ಳಾರಿಗೆ ವಿದ್ಯಾಭ್ಯಾಸ ಪಡೆಯಲು ಹೋಗುತ್ತಿದ್ದಾರೆ. ಆದ್ದರಿಂದ ಬೆಳಿಗ್ಗೆ 7.45 ಕ್ಕೆ ಬಸ್ ಡಿಪೋದಿಂದ ಬಿಟ್ಟು 8 ಕ್ಕೆ ಬಾದನಹಟ್ಟಿ ಗ್ರಾಮಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು. ಬಸ್ ಗಳು ಈ ಸಮಯದಲ್ಲಿ ಬರದೇ ತಡವಾಗಿ ಬರುತ್ತಿರುವುದರಿಂದ ಗ್ರಾಮದಿಂದ 3 ಕಿ. ಮೀ. ದೂರವಿರುವ ಕುರುಗೋಡಿಗೆ ಕಾಲ್ನಡಿಗೆ ಮೂಲಕ ಬಂದು ಅಲ್ಲಿಂದ ಬಳ್ಳಾರಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸರಿಯಾಗಿ ಕಾಲೇಜ್ ಗೆ ಹಾಜರಾಗಲು ಆಗುತ್ತಿಲ್ಲ. ತರಗತಿಗಳು ಮಿಸ್ ಆಗುತ್ತಿವೆ. ತಡವಾಗಿ ಕಾಲೇಜ್ ಗೆ ಹೋಗುವುದರಿಂದ ಉಪನ್ಯಾಸಕರು ಹೊರಗಡೆ ನಿಲ್ಲಿಸುತ್ತಿದ್ದಾರೆ. ಪರಿಣಾಮ ಶಿಕ್ಷಣದಿಂದ ದೂರ ಉಳಿಯುವಂತ ಸಮಸ್ಯೆ ಎದುರಾಗಿದೆ ಎಂದರು.
ಇನ್ನೂ ಪೋಷಕರು ಕಾಲೇಜ್ ಬಿಡಿಸುವ ಹಂತಕ್ಕೆ ಮುಂದಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಆದ್ದರಿಂದ ನಿತ್ಯ ಬೆಳಿಗ್ಗೆ 7.45 ಕ್ಕೆ ಬಸ್ ಕುರುಗೋಡು ಡಿಪೋ ಬಿಟ್ಟು 8 ಗಂಟೆಗೆ ಬಾದನಹಟ್ಟಿ ಗ್ರಾಮಕ್ಕೆ ಬರುವ ವ್ಯವಸ್ಥೆ ಕಲ್ಪಿಸಬೇಕು. ಒಂದು ವೇಳೆ ಸರಿಯಾದ ಸಮಯಕ್ಕೆ ಬಸ್ ಬಾರದೆ ಇದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಆಗ್ರಹಿಸಿದರು.
ಅಲ್ಲದೆ ಕೃಷ್ಣ ನಗರ ಕ್ಯಾಂಪ್, ಸಿದ್ದಮ್ಮನಹಳ್ಳಿ, ಕುಡತಿನಿ ಮಾರ್ಗಕ್ಕೆ ಬಸ್ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಸಾರಿಗೆ ಘಟಕದ ವ್ಯವಸ್ಥಾಪಕ ಹರಿಕೃಷ್ಣ ಭೇಟಿ ನೀಡಿ, ಘಟಕದಲ್ಲಿ ಬಸ್ ಗಳ ಕೊರತೆ ಮತ್ತು ಸಿಬ್ಬಂದಿಗಳ ಸಮಸ್ಯೆ ಯಿಂದ ಬಸ್ಗಳು ಸರಿಯಾಗಿ ಓಡಾಡುವುದಕ್ಕೆ ಆಗಿಲ್ಲ ಇನ್ಮುಂದೆ ಸರಿಯಾದ ಸಮಯಕ್ಕೆ ಬಸ್ ಬಿಡಲಾಗುವುದು ಎಂದು ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಅಂಜಿನಿ,ನಂದಿನಿ, ಸಂದೀಪ್,ಗಣೇಶ್,ಸುರೇಶ,ಸೋಮಶೇಖರ್ ಸೇರಿ ಇತರೆ ವಿದ್ಯಾರ್ಥಿಗಳು ಇದ್ದರು. ಬಾದನಹಟ್ಟಿ ಯಿಂದ ಬಳ್ಳಾರಿಗೆ ತೆರಳಲು ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ಆಗ್ರಹಿಸಿ ಬಾದನಹಟ್ಟಿ ಗ್ರಾಮದಲ್ಲಿ ಸೋಮವಾರ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.ಕರಿ ಬಸವ, ಹೊನ್ನೂರ,ವೆಂಕಟೇಶ್, ಪ್ರದೀಪ್ ಕುಮಾರ್,ಅಂಜಲಿ, ಜಡೆಶ್,ನಾಗರಾಜ್ ಇದ್ದರು.


