ಕಡಬ ; ಸೌದಿ ಜೈಲ್ನಲ್ಲಿ ಸೆರೆಮನೆ ವಾಸದ ಬಳಿಕ ಈಗ ಬಂಧಮುಕ್ತವಾಗಿರುವ ಕಡಬದ ಚಂದ್ರಶೇಖರ್ ಅವರು ಸುರಕ್ಷಿತವಾಗಿ ತನ್ನ ಮನೆಯನ್ನು ಸೇರಿದ್ದಾರೆ.
ಸೋಮವಾರ ರಾತ್ರಿ ಚಂದ್ರಶೇಖರ್ ಅವರು ಸೌದಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು.ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಚಂದ್ರಶೇಖರ್ ಅವರು, ಮಾಧ್ಯಮಗಳಲ್ಲಿ ತನ್ನ ಬಂಧನದ ವಿಚಾರದ ಬಗ್ಗೆ ವರದಿ ಬಂದಿರುವ ಕಾರಣ ನನ್ನ ಬಿಡುಗಡೆ ಸುಲಭಗೊಂಡಿದೆ, ಸೌದಿಯಲ್ಲಿರುವ ಮಂಗಳೂರಿನವರು ತನ್ನ ಬಿಡುಗಡೆಗೆ ನೆರವಾಗಿದ್ದಾರೆ. ಅವರೆಲ್ಲರಿಗೂ ತಾನು ಕೃತಜ್ಞನಾಗಿದ್ದೇನೆ. ಇದೀಗ ಅಮ್ಮನನ್ನು ನೋಡಿ ತುಂಬಾ ಖುಷಿಯಾಗಿದೆ, ಮುಂದೆ ತನಗೆ ಬೇರೆ ಉದ್ಯೋಗ ಸಿಗುವ ಭರವಸೆ ಇದೆ ಎಂದು ಹೇಳಿದರು.
ಸೌದಿಯಲ್ಲಿ ಜೈಲಿನಲ್ಲಿದ್ದಾಗ ತುಂಬಾ ಕಷ್ಟ ಆಗಿತ್ತು, ಗೆಳೆಯರು ಮನೆಯವರು ಸೇರಿದಂತೆ ಯಾರ ಹತ್ತಿರವೂ ಸರಿಯಾಗಿ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ತನಗೆ ಮೊಬೈಲ್ ಕೊಟ್ಟರೂ ಎರಡೇ ನಿಮಿಷ ಮಾತನಾಡಬಹುದಿತ್ತು. ತಪ್ಪು ಮಾಡದೇ ನಾನು ಸೆರೆಮನೆ ವಾಸ ಅನುಭವಿಸಿದೆ ಎಂದರು. ಸೌದಿಯಲ್ಲಿರುವ ಮಹಿಳೆಯೊಬ್ಬರು ನೀಡಿದ ದೂರಿನಂತೆ ಚಂದ್ರಶೇಖರ್ ಅವರ ಖಾತೆಗೆ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ರೂ. ವರ್ಗಾವಣೆಯಾಗಿತ್ತು. ಇದು ದಾಖಲೆಗಳನ್ನು ನಕಲಿಮಾಡಿ ಹಣ ದೋಚುವ ಕೆಲವು ದುಷ್ಕರ್ಮಿಗಳ ಸಂಚಾಗಿದ್ದು, ಚಂದ್ರಶೇಖರ್ ಅವರ ನಕಲಿ ಖಾತೆಯನ್ನು ತೆರೆದು ಈ ಕೃತ್ಯ ಎಸಗಲಾಗಿತ್ತು.
ಜೈಲು ಸೇರಲು ಕಾರಣ
ಬೆಂಗಳೂರಿನಲ್ಲಿದ್ದ ಚಂದ್ರಶೇಖರ್ ಭಡ್ತಿಯೊಂದಿಗೆ ಸೌದಿಗೆ ತೆರಳಿದ್ದರು. ಅಲ್ಲಿ ಅವರು ಮೊಬೈಲ್ ಸಿಮ್ ಖರೀದಿಗೆಂದು ಬೆರಳಚ್ಚು ಹಾಗೂ ಇತರ ವಿವರ ನೀಡಿದ್ದರು.
ಅವರ ಗೆಳೆಯರು, ಕೆಲಸ ಮಾಡುತ್ತಿದ್ದ ಕಂಪೆನಿಯ ಪ್ರತಿನಿಧಿಗಳು ಸೇರಿ ದಂಡ ಪಾವತಿಸಿ, ಬಿಡುಗಡೆಗೆ ಶ್ರಮಿಸಿದ್ದಾರೆ. ಕೊನೆಗೂ ಚಂದ್ರಶೇಖರ್ ಆಗಮಿಸುವಂತಾಗಿದೆ.


