ಮುದ್ದೇಬಿಹಾಳ : ಉದ್ಯೋಗ ಖಾತ್ರಿ ಕಾಮಗಾರಿಯಡಿ ನಿರ್ಮಿಸಿದ ಗ್ರಾಪಂ ಕಂಪೌಂಡ್ ಕಾಮಗಾರಿಯ ಹಣ ಬಿಡುಗಡೆಗೆ ಲಂಚ ಕೇಳಿದ್ದ ತಂಗಡಗಿ ಗ್ರಾಪಂ ಪಿಡಿಓ ಬಸವರಾಜ ತಾಳಿಕೋಟಿ, ಇಂಜಿನೀಯರ್ ಪ್ರಸನ್ನಕುಮಾರ ಶೆಟ್ಟರ್ ಅವರು 30000 ರೂ ಲಂಚ ಪಡೆಯುವಾಗ ದಾಳಿ ಮಾಡಿದ ವಿಜಯಪುರ ಲೋಕಾಯುಕ್ತ ಪೊಲೀಸರು ಹಣದ ಸಮೇತ ಇಬ್ಬರನ್ನೂ ಬಂಧಿಸಿದ್ದಾರೆ.
ಶನಿವಾರ ತಾಪಂ ಕಚೇರಿಯ ಉದ್ಯೋಗ ಖಾತ್ರಿ ವಿಭಾಗದ ಕೊಠಡಿಯಲ್ಲಿ ದೂರುದಾರರಿಂದ ಲಂಚದ ಹಣ ಪಡೆಯುವಾಗ ರೆಡ್ ಹ್ಯಾಂಡೆಡ್ ಆಗಿ ಹಿಡಿಯಲಾಗಿದೆ. ವಿಚಾರಣೆಯ ನಂತರ ನಗದು ಸಮೇತ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ಮುಂದಿನ ಕಾನೂನು ಕ್ರಮಕ್ಕೆ ಸಿದ್ದತೆ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಹನುಮಂತರಾಯಪ್ಪ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಇನ್ಸಪೆಕ್ಟರಗಳಾದ ಆನಂದ ಠಕ್ಕನವರ್, ಆನಂದ ಡೋಣಿ, ಸಿಬ್ಬಂದಿಗಳಾದ ಸಂತೋಷ ಅಮರಖೇಡ, ಎಸ್.ಎಸ್.ಮುಂಜೆ, ಐ.ಎಸ್.ಕನ್ನೂರ, ಎ.ಜಿ.ಪಡಶೆಟ್ಟಿ, ಎ.ಎಚ್.ಗೋಲಗೇರಿ, ಎ.ಎ.ಮುಲ್ಲಾ, ಎಂ.ಎ.ಸಲಗೊಂಡ ದಾಳಿಯಲ್ಲಿದ್ದರು. ಸ್ಥಳೀಯ ಪೊಲೀಸರು ನೆರವು ನೀಡಿದ್ದರು.


