ಮಂಗಳೂರು : ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಮುಸುಕುಧಾರಿ ಡಕಾಯಿತರ ತಂಡವೊಂದು ಮನೆಯಲ್ಲಿದ್ದ ತಾಯಿ ಮತ್ತು ಮಗನನ್ನು ಕಟ್ಟಿಹಾಕಿ ಮನೆಯಲ್ಲಿದ್ದ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿರುವ ಘಟನೆ ನಡೆದಿದೆ. ಗ್ರಾ.ಪಂ.ಮಾಜಿ ಸದಸ್ಯ ಗುರುಪ್ರಸಾದ್ ರೈ ಅವರ ಮನೆಯಲ್ಲಿ ಈ ಡಕಾಯಿತರು ಧಾಳಿ ನಡೆಸಿದ್ದಾರೆ . ಸೆ.7ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಎಂಟು ಮಂದಿಯಿದ್ದ ಡಕಾಯಿತರು ಮನೆಯ ಮುಂಬಾಗಿಲಿನಿಂದ ಬಲವಂತವಾಗಿ ನುಗ್ಗಿ ಗುರುಪ್ರಸಾದ್ ಹಾಗೂ ಆತನ ತಾಯಿಯನ್ನು ಕಟ್ಟಿಹಾಕಿ ಚಾಕು ತೋರಿಸಿ ಮನೆ ದರೋಡೆ ಮಾಡಿದ್ದರು. 40 ಸಾವಿರ ನಗದು ಹಾಗೂ 15 ಪವನ್ ಚಿನ್ನವನ್ನು ಡಕಾಯಿತರು ದೋಚಿದ್ದಾರೆ. ಡಕಾಯಿತರು ಹೊರಡುವ ಮೊದಲು ಗುರುಪ್ರಸಾದ್ ಅವರ ಮೊಬೈಲ್ ಫೋನ್ ಅನ್ನು ನೀರಿನಲ್ಲಿ ಬೀಳಿಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ಕಳ್ಳರು ಮನೆಯಲ್ಲಿದ್ದರು. ಮನೆ ನಿರ್ಜನ ಸ್ಥಳದಲ್ಲಿದೆ. ಗುರುಪ್ರಸಾದ್ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಮೂರು ದಿನಗಳ ಹಿಂದೆ ಕೆಲಸ ಬಿಟ್ಟು ತನ್ನ ಊರಾದ ಕಾಸರಗೋಡಿಗೆ ವಾಪಸಾಗಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ರಿಷ್ಯಂತ್ ಹಾಗೂ ಇತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳರು ತುಳು ಮತ್ತು ಕನ್ನಡದಲ್ಲಿ ಮಾತನಾಡುತ್ತಿದ್ದರು.


