ಬೆಳ್ತಂಗಡಿ : ತಾಲೂಕಿನ ನಡ ಗ್ರಾಮದ ದೇರ್ಲಕ್ಕಿಯ ಭೀಮಂಡೆ ಎಂಬಲ್ಲಿ ರಸ್ತೆ ವಿಚಾರದಲ್ಲಿ ಸಂಬಂಧಿಕರೇ ಹೊಡೆದಾಟ ನಡೆಸಿದ ಘಟನೆ ಆದಿತ್ಯವಾರ ಬೆಳಿಗ್ಗೆ ನಡೆದಿದೆ.ಮಾರ್ಗ ದುರಸ್ತಿ ಮಾಡುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕತ್ತಿ ದೊಣ್ಣೆಯಿಂದ ಹೊಡೆದಾಡಿಕೊಂಡಿದ್ದು ಇತ್ತಂಡಗಳ 7 ಮಂದಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ದೆರ್ಲಕ್ಕಿ ಸಮೀಪದ ಭೀಮಂಡೆ ಎಂಬಲ್ಲಿ ಕಳೆದ 32 ವರ್ಷಗಳಿಂದ ಮಾರ್ಗದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಾಗದ ತಕರಾರು ಇದ್ದು ಜೂನ್.4 ರಂದು ಬೆಳಗ್ಗೆ ಓಬಯ್ಯ ಗೌಡ ಹಾಗೂ ಅವರ ತಮ್ಮಂದಿರಾದ ಕೃಷ್ಣಪ್ಪ ಗೌಡ ಕೇಶವ ಗೌಡ ಹಾಗೂ ಕೃಷ್ಣಪ್ಪ ಅವರ ಪತ್ನಿ ಭವಾನಿ ಅವರು ಮನೆಗೆ ಹೋಗುವ ರಸ್ತೆಗೆ ಪಿಕಪ್ನಲ್ಲಿ ಚರಲು ತಂದು ಹಾಕಿ ದುರಸ್ತಿ ಮಾಡಲು ತೆರಳಿದ ಸಂದರ್ಭ ಅವರ ಸಂಬಂಧಿಕರಾದ ಪೂವಪ್ಪ ಗೌಡ ಅವರ ಪತ್ನಿ ಲಲಿತ ಹಾಗೂ ಅವರ ಮಗ ವಿಜಯ ಗೌಡ ಇವರುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಲಲಿತಾ ಕಡೆಯವರು ಕತ್ತಿ ,ದೊಣ್ಣೆ, ಹಾರೆ ,ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ.
ಈ ವೇಳೆ ಎರಡು ತಂಡದ ನಡುವೆ ಹೊಡೆದಾಟ ನಡೆಸಿದ್ದಾರೆ. ಈ ವೇಳೆ ಕೃಷ್ಣಪ್ಪ ಅವರಿಗೆ ಕೈಗೆ ,ಸೊಂಟಕ್ಕೆ , ಓಬಯ್ಯ ಅವರಿಗೆ ತಲೆಗೆ ಕೈ ಮತ್ತು , ಬೆನ್ನಿಗೆ ಗಾಯ , ಕೇಶವ ಅವರಿಗೆ ತಲೆಗೆ, ಭವಾನಿ ಅವರಿಗೆ ತಲೆ ಹಾಗೂ ಕೈಗೆ ಗಾಯಗಳಾಗಿದೆ.
ಇನ್ನೊಂದು ತಂಡದ ಪೂವಪ್ಪ ಗೌಡ ಹಾಗೂ ಇನ್ನಿತರರಿಗು ಸಣ್ಣಪುಟ್ಟ ಗಾಯಗಳಾಗಿದೆ. ಎರಡು ತಂಡದ ಏಳು ಮಂದಿ ಗಾಯಗೊಂಡವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.


