ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ಕೂಲಿ ಹಣದ ವಿಚಾರವಾಗಿ ಕಾರ್ಮಿಕರು ಮತ್ತು ತೋಟದ ಮಾಲೀಕರ ನಡುವೆ ಉಂಟಾದ ಗಲಾಟೆ ವೇಳೆ ಮಿಸ್ಫೈರ್ ಸಂಭವಿಸಿ ಅಪ್ರಾಪ್ತ ಬಾಲಕನ ತಲೆಗೆ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಅಸ್ಸಾಂ ಮೂಲದ ಕಾರ್ಮಿಕರು ದಿನಕ್ಕೆ ₹400 ಕೂಲಿ ನೀಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ತೋಟದ ಮಾಲೀಕ ಜಗದೀಶ್ ಗೌಡ ಅವರು ಮೊದಲು ₹350 ನೀಡುತ್ತೇನೆ, ಉಳಿದ ₹50 ನಂತರ ಕೊಡುತ್ತೇನೆ ಎಂದು ಹೇಳಿದ್ದರೆನ್ನಲಾಗಿದೆ. ಆದರೆ ಕಾರ್ಮಿಕರು “ಈಗಲೇ ₹400 ಕೊಡದಿದ್ದರೆ ಕೆಲಸ ಮಾಡುವುದಿಲ್ಲ” ಎಂದು ಹೇಳಿ ಹೊರಡಲು ಮುಂದಾಗಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ಕಾರ್ಮಿಕರು ಮಾಲೀಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾರ್ಮಿಕರನ್ನು ಹೆದರಿಸುವ ಉದ್ದೇಶದಿಂದ ಮಾಲೀಕ ಗನ್ ತೆಗೆದುಕೊಂಡಾಗ ಮಿಸ್ಫೈರ್ ಸಂಭವಿಸಿದ್ದು, ಗುಂಡು ಅಪ್ರಾಪ್ತ ಬಾಲಕನ ತಲೆಗೆ ತಗುಲಿ ಗಂಭೀರ ಗಾಯವಾಗಿದೆ.
ಗಾಯಗೊಂಡ ಬಾಲಕನಿಗೆ ಮೊದಲು ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಬಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


