ಬಂಟ್ವಾಳ : ಕರಾವಳಿಯ ಪ್ರಸಿದ್ಧ ದೈವ ಆರಾಧನಾ ಕ್ಷೇತ್ರಗಳಲ್ಲಿ ಒಂದಾದ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕೊರಗಜ್ಜ ಕ್ಷೇತ್ರದಲ್ಲಿ ನಡೆದ ಕೊರಗಜ್ಜ ಕೋಲ ಈ ಬಾರಿ ವಿಶೇಷ ಗಮನ ಸೆಳೆಯಿತು. ಕನ್ನಡ ಚಿತ್ರರಂಗದ ನಟಿ ರಚಿತಾ ರಾಮ್ ಕೋಲೋತ್ಸವದಲ್ಲಿ ಭಾಗವಹಿಸಿ ದೈವದ ಆಶೀರ್ವಾದ ಪಡೆದರು.
ಬೆಂಜನಪದವಿನ ಕೊರಗಜ್ಜ ಕ್ಷೇತ್ರದಲ್ಲಿ ನಡೆದ ದೈವ ಕೋಲ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ನೆರವೇರಿತು. ಈ ವೇಳೆ ನಟಿ ರಚಿತಾ ರಾಮ್ ಕ್ಷೇತ್ರಕ್ಕೆ ಭೇಟಿ ನೀಡಿ ಕೊರಗಜ್ಜ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕೋಲೋತ್ಸವದಲ್ಲಿ ಭಾಗವಹಿಸಿ ದೈವದ ಆಶೀರ್ವಾದ ಪಡೆದರು.
ನಟಿ ಆಗಮನದ ಹಿನ್ನೆಲೆ ಕ್ಷೇತ್ರದಲ್ಲಿ ಅಭಿಮಾನಿಗಳು ಹಾಗೂ ಭಕ್ತರ ಸಂಭ್ರಮ ಹೆಚ್ಚಿತ್ತು. ಹಲವರು ನಟಿಯೊಂದಿಗೆ ಫೋಟೋ ಹಾಗೂ ಸೆಲ್ಫಿ ತೆಗೆಯಲು ಮುಗಿಬಿದ್ದರು.ಕರಾವಳಿ ಭಾಗದ ಜನಪದ ಸಂಸ್ಕೃತಿ ಮತ್ತು ದೈವ ಆರಾಧನೆ ಬಗ್ಗೆ ವಿಶೇಷ ಅಭಿಮಾನ ಹೊಂದಿರುವುದಾಗಿ ರಚಿತಾ ರಾಮ್ ತಿಳಿಸಿದರು. ಕೋಲೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿ ದೈವದ ದರ್ಶನ ಪಡೆದರು.
ಕೊರಗಜ್ಜ ತುಳುನಾಡಿನ ಜನಪದ ನಂಬಿಕೆಗಳಲ್ಲಿ ಪ್ರಮುಖ ದೈವವಾಗಿ ಆರಾಧಿಸಲ್ಪಡುತ್ತಿದ್ದು, ದೀನ-ದಲಿತರ ಪರ ನಿಂತು ಸತ್ಯ ಮತ್ತು ಧರ್ಮಕ್ಕಾಗಿ ಬದುಕಿದ ವ್ಯಕ್ತಿತ್ವವಾಗಿ ಸ್ಥಳೀಯ ಐತಿಹ್ಯಗಳಲ್ಲಿ ಉಲ್ಲೇಖಿಸಲಾಗುತ್ತದೆ.


