ರಾಯಚೂರು : ಸಾಧು-ಸಂತರ ವೇಷದಲ್ಲಿ ಬಂದ ಖದೀಮರ ತಂಡ ಮೆಡಿಕಲ್ ಸ್ಟೋರ್ ಮಾಲೀಕರಿಗೆ ಮಂಕುಬೂದಿ ಎರಚಿ ಬಂಗಾರದ ಉಂಗುರ ಹಾಗೂ ನಗದು ದೋಚಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ.
ಸಿಂಧನೂರ ನಗರದ ಕುಷ್ಟಗಿ ರಸ್ತೆಯ ಕೂಡಲಸಂಗಮ ಚಿತ್ರಮಂದಿರ ಎದುರಿನ ಮೆಡಿಕಲ್ ಸ್ಟೋರ್ನಲ್ಲಿ ಘಟನೆ ನಡೆದಿದ್ದು, “ಭವಿಷ್ಯ ಹೇಳುತ್ತೇವೆ” ಎಂದು ನಂಬಿಸಿ ಖದೀಮರು ಅಂಗಡಿಗೆ ಪ್ರವೇಶಿಸಿದ್ದಾರೆ ಎನ್ನಲಾಗಿದೆ.
ಖದೀಮರು ನೀಡಿದ ಹೂವಿನ ವಾಸನೆ ಪಡೆದ ಬಳಿಕ ಅಂಗಡಿ ಮಾಲೀಕರಿಗೆ ತಲೆ ಸುತ್ತುವಂತಾಗಿ ಮಂಕುಬಿದ್ದ ಸ್ಥಿತಿ ಉಂಟಾಗಿದೆ. ಇದೇ ವೇಳೆ ಆರೋಪಿಗಳು ಬಂಗಾರದ ಉಂಗುರ ಹಾಗೂ ₹10,500 ನಗದು ದೋಚಿ ಪರಾರಿಯಾಗಿದ್ದಾರೆ.
ಸಾಧು-ಸಂತರ ವೇಷದಲ್ಲಿ ಸಕ್ರಿಯವಾಗಿರುವ ಗ್ಯಾಂಗ್ ಒಂಟಿ ಮಹಿಳೆಯರು ಹಾಗೂ ಮನೆಗಳನ್ನು ಗುರಿಯಾಗಿಸಿಕೊಂಡು ಸಂಚರಿಸುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಸಿಂಧನೂರಿನಲ್ಲಿ ಜನರಲ್ಲಿ ಆತಂಕ ಹೆಚ್ಚಾಗಿದೆ. ಘಟನೆ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.


