ಮಂಗಳೂರು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ನವೆಂಬರ್ 17 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜರುಗಲಿರುವ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಆಚರಣೆಯ ಸುಸಂದರ್ಭದಲ್ಲಿ “ನಂದಿನಿ” ಉತ್ಪನ್ನಗಳ ಶ್ರೇಣಿಗೆ ಸೀಡ್ಸ್ ಡಿಲೈಟ್ ಮತ್ತು ಗುವಾ ಚಿಲ್ಲಿ ಲಸ್ಸಿ ಉತ್ಪನ್ನಗಳನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಾರುಕಟ್ಟೆಗೆ ನೂತನವಾಗಿ ಬಿಡುಗಡೆ ಮಾಡಲಿದೆ ಎಂದು ಒಕ್ಕೂಟದ ಅಧ್ಯಕ್ಯರಾದ ರವಿರಾಜ್ ಹೆಗ್ಡೆಯವರು ತಿಳಿಸಿದ್ದಾರೆ.
ನಂದಿನಿ ಹೊಸ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಹಾಲು ಒಕ್ಕೂಟವು ದಿನಾಂಕ 17.11.2025ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ ನಂದಿನಿ ಪಾರ್ಲರ್, ಪ್ರಾಂಚೈಸಿ ಮತ್ತು ಡೀಲರ್ ಕೇಂದ್ರಗಳಲ್ಲಿ ಮೊದಲು ಬಂದ ಗ್ರಾಹಕರಿಗೆ ದಾಸ್ತಾನು ಮುಗಿಯುವವರೆಗೆ ಉಚಿತವಾಗಿ “ನಂದಿನಿ” ಸೀಡ್ಸ್ ಡಿಲೈಟ್ ಮತ್ತು ಗುವಾ ಚಿಲ್ಲಿ ಲಸ್ಸಿ ನೀಡಲಾಗುವುದು. ಅವಿಭಜಿತ ಜಿಲ್ಲೆಯ “ನಂದಿನಿ” ಗ್ರಾಹಕರು ಸದರಿ ನೂತನ ಉತ್ಪನ್ನಗಳನ್ನು ಖರೀದಿಸಿ, ಹಾಲು ಉತ್ಪಾದಕರನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಲು ಕೋರಿದ್ದಾರೆ.
ನಂದಿನಿ ಸೀಡ್ಸ್ ಡಿಲೈಟ್ : ಒಕ್ಕೂಟದಿಂದ ಆರೋಗ್ಯದಾಯಕವಾಗಿರುವ “ನಂದಿನಿ” ಸೀಡ್ಸ್ ಡಿಲೈಟ್ ಉತ್ಪನ್ನವನ್ನು ಅತ್ಯುತ್ತಮ ಗುಣಮಟ್ಟದ ಕಲ್ಲಂಗಡಿ ಬೀಜ, ಸಿಹಿ ಕುಂಬಳಕಾಯಿ ಬೀಜ, ಅಗಸೆ ಬೀಜ, ಬಾದಾಮಿ, ಸಕ್ಕರೆ, “ನಂದಿನಿ” ಹಾಲು, “ನಂದಿನಿ” ತುಪ್ಪ, “ನಂದಿನಿ” ಕೋವಾ ಬಳಸಿ, ಆಧುನಿಕ ತಾಂತ್ರಿಕತೆಯಿಂದ ತಯಾರಿಸಲಾಗಿದ್ದು, ಪ್ರೊಟೀನ್. ಫೈಬರ್, ವಿಟಮಿನ್ಸ್, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿರುತ್ತದೆ. ಸ್ವಾಭಾವಿಕವಾಗಿ ಸಿಹಿ ಉತ್ಪನ್ನವೆಂದರೆ ಆರೋಗ್ಯಕ್ಕೆ ಮಾರಕ ಎಂಬ ಅಭಿಪ್ರಾಯವಿದೆ, ಆದರೆ ನಂದಿನಿ ಸೀಡ್ಸ್ ಡಿಲೈಟ್ ಸೇವನೆಯಿಂದ ಹೃದಯದ ಆರೋಗ್ಯ, ತೂಕ ನಿರ್ವಹಣೆ, ಉತ್ತಮ ಜೀರ್ಣಕ್ರಿಯೆ, HDL ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಕಾರಿಯಾಗಲಿದೆ.
ನಂದಿನಿ ಗುವಾ ಚಿಲ್ಲಿ ಲಸ್ಸಿ : ಉತ್ಪನ್ನವನ್ನು ಪೇರಳೆ ಹಣ್ಣಿನ ತಿರುಳು, ಉಪ್ಪು, ಸಕ್ಕರೆ, ಮೆಣಸಿನ ಹುಡಿ, ನಿಂಬೆ ಹಣ್ಣಿನ ರಸ ಮತ್ತು “ನಂದಿನಿ” ಮೊಸರನ್ನು ಬಳಸಿ. ಆಧುನಿಕ ತಾಂತ್ರಿಕತೆಯಿಂದ ತಯಾರಿಸಲಾಗಿದ್ದು, ಕ್ಯಾಲ್ಸಿಯಮ್, ವಿಟಮಿನ್ ಸಿ, ಪೊಟ್ಯಾಶಿಯಮ್ ಇತ್ಯಾದಿ ಪೋಷಕಾಂಶಗಳನ್ನು ಒಳಗೊಂಡಿದ್ದು, ಮೂಳೆಗಳ ಬಲವರ್ಧನೆ, ಹೃದಯ/ತ್ವಚೆಯ ಆರೋಗ್ಯ ವೃದ್ಧಿ, ಉತ್ತಮ ಜೀರ್ಣಕ್ರಿಯೆ, ರಕ್ತದೊತ್ತಡ ಕಡಿಮೆ ಮಾಡಲು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.
ಈ ನೂತನ “ನಂದಿನಿ” ಉತ್ಪನ್ನಗಳು ಬಿಡುಗಡೆಯ ಪೂರ್ವ ಮಾರುಕಟ್ಟೆ ಪರೀಕ್ಷಾ ಸಂದರ್ಭದಲ್ಲಿ ಉತ್ಪನ್ನಗಳ ಗುಣಮಟ್ಟಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿರುತ್ತದೆ. ಎಲ್ಲಾ ಸಂದರ್ಭಗಳಲ್ಲೂ ಬಳಸಲು ಯೋಗ್ಯವಾಗಿದೆ ಎಂದು ತಿಳಿಸಿದ್ದಾರೆ.
ಈ ಉತ್ಪನ್ನ ಗಳು ಆರೋಗ್ಯಕರವಾಗಿದ್ದು ಇದರಲ್ಲಿ ಮೂಲೆಗಳ ಬಲವರ್ಧನೆ,ಉತ್ತಮ ಜೀರ್ಣಕ್ರಿಯೆ, ಹಾಗೂ ಜೀವನಿರೋಧಕ ಶಕ್ತಿ ಇದೆ ಎಂದು ತಿಳಿಸಿದರು.ಗ್ರಾಹಕರಿಗೆ ಪರಿಚಯಿಸುವ ದೃಷ್ಟಿಯಿಂದ ಉಚಿತವಾಗಿ ನೀಡುತ್ತಿದ್ದೆವೆ ಎಂದು ಹೇಳಿದರು.ಇದು ಒಂದು ಪೀಸ್ ಆಗಿದ್ದು ಇದರ ಬೆಲೆ 12 ರೂ. ಹಾಗೂ ೧೫ ರೂ. ನಿಗದಿಪಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ,ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು,ಮಮತಾ ಶೆಟ್ಟಿ,ಸುಧಾಕರ್ ಶೆಟ್ಟಿ,ಚಂದ್ರಶೇಖರ ರಾವ್,ವ್ಯವಸ್ಥಾಪಕರಾದ ರವಿರಾಜ್ ಉಡುಪ ಹಾಗೂ ಗುರುಪ್ರಸಾದ್ ರವರು ಉಪಸ್ಥಿತರಿದ್ದರು.


