ಮಂಗಳೂರು : ಭಾರತ ಹಾಗೂ ನೇಪಾಳದ ವ್ಯಾಟಿಕನ್ ನ ಉಪ ರಾಯಭಾರಿ ವಂ| ಆ್ಯಂಡ್ರಿಯಾ ಫಾನ್ಸಿಯಾ ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಮಂಗಳವಾರ ಸೌಹಾರ್ದ ಭೇಟಿ ನೀಡಿದರು.


ಈ ವೇಳೆ ಕ್ಷೇತ್ರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಪೂಜೆಯಲ್ಲಿ ಅವರು ಪಾಲ್ಗೊಂಡು ಇಲ್ಲಿನ ಸಂಪ್ರದಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧರ್ಮಗುರುಗಳಿಗೆ ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಧರ್ಮಗುರುಗಳು ಕ್ಷೇತ್ರದ ಬಗ್ಗೆ ಮಾಹಿತಿ ಪಡೆದರು. ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಹಾಗೂ ಅವರ ತತ್ತ್ವಗಳ ಕುರಿತ ಕೆಲವು ಪುಸ್ತಕಗಳನ್ನು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ ಅವರಿಂದ ಪಡೆದುಕೊಂಡರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರಧಾನ ಧರ್ಮಗುರು ಜೋಸೆಫ್ ವಲಯಪರಂಬಿಲ್, ಬಿಜು ಜೋಸೆಫ್ ಮಂಗಳೂರು, ಮನೋಜ್, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜಯರಾಜ್ ಸೋಮಸುಂದರ್, ಮಾಜಿ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ದಿನೇಶ್ ಅಂಚನ್ ಉಪಸ್ಥಿತರಿದ್ದರು.


