ಉಳ್ಳಾಲ ; ರಾ.ಹೆ.66ರ ಕೊಲ್ಯ -ಅಡ್ಕ ನಡುವೆ ಬಾನುವಾರ ರಾತ್ರಿ ಸಂಭವಿಸಿದ್ದ ಭೀಕರ ಕಾರು ಅಪಘಾತದಲ್ಲಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವನೂ ಸೋಮವಾರ ಮದ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಕಾಸರಗೋಡು ಜಿಲ್ಲೆಯ ಉಪ್ಪಳ ಹಿದಾಯತ್ ನಗರ ನಿವಾಸಿ ಬಾಷರ್ ಅಹಮ್ಮದ್ (22)ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾನೆ.
ಭಾನುವಾರ ರಾತ್ರಿ ರಾ.ಹೆ 66 ರ ಕೊಲ್ಯ- ಅಡ್ಕ ನಡುವಿನಲ್ಲಿ ಮಂಗಳೂರಿನಿಂದ ತಲಪಾಡಿಗೆ ನಾಲ್ವರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್ ಏರಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ನಜ್ಜುಗುಜ್ಜಾಗಿತ್ತು.ಢಿಕ್ಕಿಯ ತೀವ್ರತೆಗೆ ಕಬ್ಬಿಣದ ವಿದ್ಯುತ್ ಕಂಬವೇ ಧರೆಗುರುಳಿತ್ತು.ಪರಿಣಾಮ ಸ್ಥಳದಲ್ಲಿಯೇ ಕಾರು ಚಾಲಕ ಉದ್ಯಾವರ ಹತ್ತನೇ ಮೈಲು ನಿವಾಸಿ ಅಬ್ದುಲ್ ರಿಫಾಯಿ(24)ಮೃತಪಟ್ಟಿದ್ದ.
ಇಂದು ಮೃತ ಪಟ್ಟ ಬಾಷರ್ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿಯಾಗಿದ್ದ.ಜ.28 ರಂದು ಗಲ್ಫ್ ನಿಂದ ಆಗಮಿಸಿದ್ದ ಮಹಮ್ಮದ್ ರಿಫಾಯಿ ಚಿಕ್ಕಪ್ಪನ ಪುತ್ರ ಬಾಷರ್ ಸೇರಿದಂತೆ ಆತನ ಸಹಪಾಠಿಗಳಾದ ಫಾತಿಮ ಹಾಗೂ ರೇವತಿ ಜತೆ ಮಂಗಳೂರಿನಿಂದ ತಲಪಾಡಿ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಜಾಗರೂಕತೆ,ನಿರ್ಲಕ್ಷ್ಯದ ಚಾಲನೆಯಿಂದ ಘಟನೆ ಸಂಭವಿಸಿದೆ.
ಅಬ್ದುಲ್ ರಿಫಾಯಿ ಕಟ್ಟಡ ಗುತ್ತಿಗೆದಾರ ಸಯ್ಯದ್ ಎಂಬವರ ಪುತ್ರನಾಗಿದ್ದ.ರಿಫಾಯಿ ವಿದೇಶದಿಂದ ಬಂದ ಖುಷಿಯಲ್ಲಿ ಸಹೋದರ ಬಾಷರ್ ಸಹಪಾಠಿಗಳೊಂದಿಗೆ ನಿನ್ನೆ ಒಟ್ಟಾಗಿದ್ದರು.
ಕಾರಿನಲ್ಲಿದ್ದ ವಿದ್ಯಾರ್ಥಿನಿಯರಾದ ರೇವತಿ ಹಾಗೂ ಫಾತಿಮ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


