ಮಂಗಳೂರು : ಡ್ರಗ್ಸ್ ವಿರುದ್ಧ ರಾಜ್ಯ ಸರ್ಕಾರ ಯುದ್ದದ ರೀತಿಯಲ್ಲಿ ಸಮರ ಸಾರಿದ್ದು, ಸಧನದಲ್ಲಿ ಈ ಬಗ್ಗೆ ಚರ್ಚೆ ಕೂಡಾ ನಡೆಸಲಾಗಿದೆ. ಈಗಾಗಲೇ ಒಂದು ವರ್ಷದಲ್ಲಿ 250 ಕೋಟಿಗೂ ಅಧಿಕ ಡ್ರಗ್ ವಶಪಡಿಸಿ ನಾಶ ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಮಂಗಳೂರಿಗೆ ಆಗಮಿಸಿದ್ದ ಅವರು ಪೊಲೀಸ್ ಸಿಬ್ಬಂದಿಗೆ ನಿರ್ಮಿಸಿದ ವಸತಿಗೃಹಗಳ ಉದ್ಘಾಟನೆಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ್ದಾರೆ. ಡ್ರಗ್ ಮಾರಾಟ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಸಹಿತ ಹಲವರನ್ನು ಬಂಧಿಸಲಾಗಿದ್ದು, ವಿದೇಶಿ ವಿದ್ಯಾರ್ಥಿಗಳನ್ನು ಗಡಿ ಪಾರು ಮಾಡುವ ಪ್ರಕ್ರಿಯೆ ನಡೆದಿದೆ. ಉಳಿದಂತೆ ಡ್ರಗ್ ಪೆಡ್ಲರ್ಗಳ ವಿರುದ್ಧ ಗೂಂಡಾ ಕಾಯ್ದೆ ಹಾಕಿ ಜೈಲಿಗೆ ಅಟ್ಟಲಾಗಿದೆ ಎಂದಿದ್ದಾರೆ. ನಕ್ಸಲ್ ನಾಯಕ ವಿಕ್ರಂ ಗೌಡ ಹತ್ಯೆಯ ಬಳಿಕ ಕೂಂಬಿಂಗ್ ನಡೆಯುತ್ತಿದ್ದು, ನಕ್ಸಲರ ಶರಣಾಗತಿಗೆ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದೆ. ಬಂದೂಕು ಬಿಟ್ಟು ನಾಡಿಗೆ ಬಂದು ಜೀವನ ಮಾಡಲು ಅವರಿಗೆ ಅವಕಾಶ ನೀಡಲಾಗುವುದು . ಈಗಾಗಲೇ ಅವರಿಗೆ ಶರಣಾಗಲು ಸಲಹೆ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಸಿಪಿಐಎಂ ಪಕ್ಷದ ದ.ಕ. ಜಿಲ್ಲಾ ಸಮಿತಿಯ ನಿಯೋಗ ಮಂಗಳೂರು ಪ್ರವಾಸದಲ್ಲಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಂಗಳೂರು ಪೊಲೀಸ್ ಕಮೀಷನರ್ ವಿರುದ್ಧ ಲಿಖಿತ ದೂರು ನೀಡಿತು. ಶಿಸ್ತು ಕ್ರಮ ಕೈಗೊಂಡು ವರ್ಗಾಯಿಸುವಂತೆ ಆಗ್ರಹಿಸಿತು.
ಜನಪರ ಸಂಘಟನೆಗಳು ನಡೆಸುವ ಪ್ರತಿಭಟನೆ, ಧರಣಿಗಳಿಗೆ ವಿನಾಕಾರಣ ಅನುಮತಿ ನಿರಾಕರಿಸುವುದು, ಪ್ರತಿಭಟನಾಕಾರರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡುತ್ತಿರುವುದು ಮಂಗಳೂರಿನಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ. ಸಿಪಿಐಎಂ ಪಕ್ಷವು ಕಮೀಷನರ್ ಅನುಪಮ್ ಅಗ್ರವಾಲ್, ಡಿಸಿಪಿ ಸಿದ್ದಾರ್ಥ ಗೋಯಲ್ ರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಸರಣಿ ಪ್ರತಿಭಟನೆಗೆ ಕರೆ ನೀಡಿದ್ದು, ವರ್ಗಾವಣೆಗೆ ಪಟ್ಟು ಹಿಡಿದಿದೆ. ಅದರ ಭಾಗವಾಗಿ ಇಂದು ಸಿಪಿಐಎಂ ಜಿಲ್ಲಾ ಸಮಿತಿ ನಿಯೋಗ ಗೃಹ ಸಚಿವರನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿತು.
ಮನವಿ ಸಲ್ಲಿಸುವ ಸಂದರ್ಭ, ಕಮೀಷನರ್ ಅಗ್ರವಾಲ್ ಪ್ರತಿಭಟನೆ, ಧರಣಿಗಳನ್ನು ವಿನಾ ಕಾರಣ ನಿರ್ಬಂಧಿಸಿರುವ, ಪ್ರತಿಭಟನಾಕಾರರ ಮೇಲೆ ಸುಳ್ಳು ಮೊಕದ್ದಮೆ ಹೂಡಿರುವ ವಿವರಗಳ ಜೊತೆಗೆ, ಕೋಮುವಾದಿ ಶಕ್ತಿಗಳ ಪರವಾಗಿ ಕಾರ್ಯನಿರ್ವಸುವ ಅವರ ನಡೆಯನ್ನು ಹಲವು ನಿದರ್ಶನಗಳ ಮೂಲಕ ಗೃಹ ಸಚಿವರ ಮುಂದೆ ಮಂಡಿಸಿತು. ಬಿಜೆಪಿ ಮುಖಂಡರು, ಜನಪ್ರತಿನಿಧಿಗಳಿಗೆ ರಸ್ತೆ ಮುಚ್ಚಿ ದಿನಗಟ್ಟಲೆ ಕಾರ್ಯಕ್ರಮ ನಡೆಸಲು ಅನುವು ನೀಡುವ, ಮತೀಯ ಕ್ರಿಮಿನಲ್ ಗಳು, ಮತೀಯ ದ್ವೇಷದ ಕೊಲೆ ಆರೋಪಿಗಳು ಪೊಲೀಸರ ಜೊತೆಯಾಗಿ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿರುವ ಘಟನೆಗಳನ್ನೂ ಗೃಹ ಸಚಿವರ ಗಮನಕ್ಕೆ ನಿಯೋಗ ತಂದಿತು. ಕಮೀಷನರ್ ಅನುಪಮ್ ಅಗ್ರವಾಲ್ ರ ಅಕ್ರಮಗಳು, ಸರ್ವಾಧಿಕಾರಿ ನಡೆ, ಭ್ರಷ್ಟಾಚಾರ, ಕೋಮು ಶಕ್ತಿಗಳೊಂದಿಗಿನ ಒಡನಾಟದ ಕುರಿತು ಇಲಾಖಾ ತನಿಖೆ ನಡೆಸುವಂತೆ, ತಕ್ಷಣದಿಂದಲೇ ಅವರನ್ನು ಮಂಗಳೂರಿನಿಂದ ವರ್ಗಾಯಿಸುವಂತೆ ಅಗ್ರಹಿಸಿತು.
ನಿಯೋಗದಲ್ಲಿ ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ ಯಾದವ ಶೆಟ್ಟಿ, ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, ಮಂಗಳೂರು ನಗರ ಸಮಿತಿ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಉಪಸ್ಥಿತರಿದ್ದರು.