ಪುತ್ತೂರು : ಮೃತಪಟ್ಟ ಕೂಲಿ ಕಾರ್ಮಿಕನನ್ನು ರಸ್ತೆ ಬದಿ ಮಲಗಿಸಿ ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ನಗರದ ಸಾಲ್ಮರದ ಕೆರೆಮೂಲೆ ಎಂಬಲ್ಲಿ ಈ ಪ್ರಕರಣ ನಡೆದಿದ್ದು, ಶವವನ್ನು ಅವಮಾನಕಾರಿ ರೀತಿಯಲ್ಲಿ ಬಿಟ್ಟು ಹೋದ ಮಾಲಕನ ವಿರುದ್ಧ ಭಾರೀ ಆಕ್ರೋಶ ಕೇಳಿ ಬಂದಿದೆ.
ಪುತ್ತೂರಿನ ಸಾಲ್ಮರದ ಕೆರೆಮೂಲೆ ಸಿಮೆಂಟ್ ಸಾರಣೆ ಕೆಲಸದ ಸಹಾಯಕರಾಗಿ ಹೋದ ಕೂಲಿ ಕಾರ್ಮಿಕರೊಬ್ಬರ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆಯ ರಸ್ತೆ ಸಮೀಪ ಮಲಗಿಸಿ ಹೋದ ಘಟನೆಯೊಂದು ಪುತ್ತೂರು ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಸಮೀಪದ ಕೆರೆಮೂಲೆಯಲ್ಲಿ ನಡೆದಿದೆ. ನವಂಬರ್ 16 ರಂದು ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಕಾಮಗಾರಿಯ ಮಾಲಕರ ವಿರುದ್ಧ ಮನೆ ಮಂದಿ ಮತ್ತು ಊರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ನಿವಾಸಿ ಸಿಮೆಂಟ್ ಸಾರಣೆ ಮೆಸ್ತ್ರಿಯೊಂದಿಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕ ಶಿವಪ್ಪ (70) ಮೃತಪಟ್ಟವರಾಗಿದ್ದಾರೆ.
ಸಾಲ್ಮರ ತಾವ್ರೋ ಇಂಡಸ್ಡ್ರೀಸ್ ನಲ್ಲಿ ಗಾರೆ ಕೆಲಸಕ್ಕೆಂದು ಶಿವಪ್ಪ ಅವರನ್ನು ಸಂಸ್ಥೆಯ ಮಾಲಕ ಕರೆಸಿಕೊಂಡಿದ್ದರು. ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಶಿವಪ್ಪ ಅವರು ಸಾವನ್ನಪ್ಪಿದ್ದು, ಅವರ ಮೃತದೇಹವನ್ನು ಮಾಲಕ ಪಿಕಪ್ ವಾಹನದಲ್ಲಿ ತುಂಬಿಸಿಕೊಂಡು ಮನೆಯ ಪಕ್ಕದಲ್ಲೇ ಇರಿಸಿ ಹೊರಟಿದ್ದಾರೆ. ಇದನ್ನು ಮನೆಯಲ್ಲಿದ್ದ ಶಿವಪ್ಪ ಅವರ ಪತ್ನಿ ಮತ್ತು ಮಗಳು ಗಮನಿಸಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಮನೆಗೆ ಕರೆತಂದಿದ್ದಾರೆ. ತಮ್ಮಲ್ಲೇ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದರೂ, ಈ ವಿಚಾರವನ್ನು ಮನೆಯವರ ಗಮನಕ್ಕೂ ತರದೆ, ಆಸ್ಪತ್ರೆಗೂ ಕೊಂಡೊಯ್ಯದೆ ಪಿಕಪ್ ವಾಹನದಲ್ಲಿ ಅವಮಾನಕಾರಿ ರೀತಿಯಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿದೆ ಎಂದು ಬಿ.ಕೆ.ಅಣ್ಣಪ್ಪ ಕಾರಕಾಡ್, ಪುತ್ತೂರು ತಾಲೂಕು ದಲಿತ್ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣರಾದ ಮಾಲಕನನ್ನು ಕೂಡಲೇ ಬಂಧಿಸುವಂತೆ ದಲಿತ ಸಂಘಟನೆಗಳು ಒತ್ತಾಯಿಸಿವೆ. ಎರಡು ದಿನಗಳಲ್ಲಿ ಬಂಧಿಸದೇ ಇದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿವೆ ಎಂದು ಬಾಬು ಮರಿಕೆ, ಆದಿದ್ರಾವಿಡ ಸೇವಾ ಸಮಿತಿ ಪುತ್ತೂರು ಘಟಕದ ಅಧ್ಯಕ್ಷ ತಿಳಿಸಿದ್ದಾರೆ.


