ಉಡುಪಿ : ಐಟಿ ದಾಳಿ ನೆಪದಲ್ಲಿ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಸಂತೋಷ್ ನಾಯಕ್ (45) ಮತ್ತು ದೇವರಾಜ್ ಸುಂದರ್ ಮೆಂಡನ್ (46) ಬಂಧಿತರು. ಉಳಿದ ಆರೋಪಿಗಳಿಗಾಗಿ ಉಡುಪಿ ಪೊಲೀಸ್ರು ಶೋಧ ಮುಂದುವರಿಸಿದ್ದಾರೆ. ಜುಲೈ 25ರಂದು ಜಿಲ್ಲೆಯ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಮಣೂರು ಎಂಬಲ್ಲಿ ಕವಿತಾ ಎಂಬುವವರ ಮನೆಯಲ್ಲಿ ಘಟನೆ ನಡೆದಿತ್ತು.
ಸ್ವಿಫ್ಟ್ ಮತ್ತು ಇನ್ನೋವಾ ಕಾರುಗಳಲ್ಲಿ ಆಗಮಿಸಿದ ಸುಮಾರು 6-8 ಅಪರಿಚಿತ ವ್ಯಕ್ತಿಗಳ ಗುಂಪು, ಮನೆ ಗೇಟ್ ಹಾರಿ, ಅಕ್ರಮವಾಗಿ ಆವರಣಕ್ಕೆ ನುಗ್ಗಿ, ಮನೆ ಬಾಗಿಲು ತೆರೆಯಲು ವಿಫಲ ಯತ್ನ ನಡೆಸಿದೆ. ಗೇಟ್ಗೆ ಹಾನಿ ಮಾಡಿದ ನಂತರ ಗುಂಪು ತಮ್ಮ ವಾಹನಗಳಲ್ಲಿ ಸ್ಥಳದಿಂದ ಪರಾರಿಯಾಗಿದೆ. ಘಟನೆ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದ ಲೈವ್ ಸರ್ವೇಲೆನ್ಸ್ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಲಾಗಿತ್ತು. ಎಚ್ಚರಿಕೆಯ ಹಿನ್ನಲೆ ಕವಿತಾ ಮನೆಯ ಬಾಗಿಲು ಭದ್ರಪಡಿಸಿ ಒಳಗೆ ಕುಳಿತಿದ್ದರು. ಮನೆಯ ಒಳಗೆ ಪ್ರವೇಶಿಸಲು ಯತ್ನ ನಡೆಸಿ ವಿಫಲರಾಗಿ ವಾಪಾಸ್ ಆಗಿದ್ದರು. ಘಟನೆ ಬಳಿಕ ಕವಿತಾ ದೂರಿನ ಮೇಲೆ ತನಿಖೆ ನಡೆಸಿದ್ದ ಉಡುಪಿ ಪೊಲೀಸ್, ಮಹಾರಾಷ್ಟ್ರ ಮತ್ತು ಬೆಂಗಳೂರಿನಲ್ಲಿ ಅಪರಾಧಿಗಳ ಶೋಧ ಮಾಡಿ ಇದೀಗ ಇಬ್ಬರನ್ನು ಬಂಧಿಸಿದ್ದಾರೆ.
ವ್ಯವಹಾರಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಕವಿತಾ ಅವರ ಕುಟುಂಬ ತೆಕಟ್ಟೆ ಪರಿಸರದಲ್ಲಿ ಸರ್ವಸಜ್ಜಿತ ಮನೆಯಲ್ಲಿ ವಾಸವಾಗಿದ್ದವರು. ಕಳೆದ ಕೆಲವು ದಿನಗಳಿಂದ ಇವರ ಮನೆಯ ಮುಂದೆ ಇದೇ ತಂಡ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿತ್ತು ಎನ್ನಲಾಗಿದೆ. ಮನೆಯ ಸುತ್ತ ಇರುವ ಸಿಸಿ ಕ್ಯಾಮೆರಾ ಮತ್ತು ಭದ್ರತೆಯನ್ನು ಗಮನಿಸಿ ಐಟಿ ವೇಷದಾರಿಗಳ ರೂಪದಲ್ಲಿ ತಂಡ ಮನೆಗೆ ನುಗ್ಗುವ ಯತ್ನ ಮಾಡಿತ್ತು ಎನ್ನುವುದು ಸದ್ಯ ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ.


