ಮಂಗಳೂರು : ತಾಪಮಾನ ಏರಿಕೆಯಿಂದಾಗಿ ಬಾವಿ, ನದಿಗಳಲ್ಲಿಯೂ ನೀರು ಬತ್ತಿ ಹೋಗುತ್ತಿದ್ದು ಕರಾವಳಿಯಲ್ಲೀಗ ಬಿಸಿಲ ಝಳ ಹೆಚ್ಚುತ್ತಿದೆ. ಈ ಬಾರಿಯ ರಣ ಬಿಸಿಲಿನಿಂದ ಜನಸಾಮನ್ಯರು ಕೂಡ ತತ್ತರಿಸುತಿದ್ದು ಬಿಸಿಲಿನ ಬೇಸಿಗೆಯ ಬೇಗೆಯಿಂದ ಜನ ಮನೆಯಿಂದ ಹೊರ ಬರುವುದಕ್ಕೂ ಅಂಜುವ ಸ್ಥಿತಿ ನಿರ್ಮಾಣವಾಗಿದೆ.

ಬರಗಾಲ,ಮಳೆಯ ಅಭಾವದಿಂದ ಮಂಗಳೂರು ನಗರಕ್ಕೆ ನೀರು ಪೂರೈಸುತ್ತಿರುವ ತುಂಬೆ ವೆಂಟೆಡ್ ಡ್ಯಾಮ್ನಲ್ಲಿಯೂ ನೀರಿಗೆ ಬರಬಂದಿದೆ.ಕರಾವಳಿಯ ಜೀವನದಿ ನೇತ್ರಾವತಿಯ ಒಡಲಲ್ಲಿ ನೀರಿನ ಮಟ್ಟ ಸಾಕಷ್ಟು ಕುಸಿದಿದೆ.ಡ್ಯಾಮ್ನಲ್ಲಿ ನೀರಿನ ಮಟ್ಟ 4.20ಕ್ಕೆ ಇಳಿಕೆಯಾಗಿದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ನಗರಕ್ಕೆ ನಾಳೆಯಿಂದ ಎರಡು ದಿನಕ್ಕೊಮ್ಮೆ ನೀರಿನ ರೇಷನಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು ಐದೂವರೆ ಲಕ್ಷಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ತುಂಬೆ ಡ್ಯಾಂನಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಂಗಳೂರು ನಗರಕ್ಕೆ ಪ್ರತೀ ದಿನ ಸುಮಾರು 160 ಎಂ.ಎಲ್.ಡಿ ನೀರನ್ನು ಪಂಪಿಂಗ್ ಮಾಡಲಾಗುತ್ತೆ. ಸದ್ಯ ಎರಡು ದಿನಕ್ಕೊಮ್ಮೆ ನೀರಿನ ರೇಷನಿಂಗ್ ಮಾಡುವುದರಿಂದ ನಿತ್ಯ ಸುಮಾರು 40ರಿಂದ 50 ಎಂ.ಎಲ್.ಡಿ ನೀರು ಉಳಿಕೆಯಾಗಲಿದೆ ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ನೇತ್ರತ್ವದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಸಾರ್ವಜನಿಕರು ಅನಗತ್ಯ ನೀರು ಪೋಲು ಮಾಡದಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮನವಿ ಮಾಡಿದ್ದಾರೆ.
ತುಂಬೆ ವೆಂಟೆಡ್ ಡ್ಯಾಂನ ಕೆಳಭಾಗದಲ್ಲಿರುವ ನೀರನ್ನು ಸಹ ಡ್ಯಾಂಗೆ ಮತ್ತೆ ಪಂಪಿಂಗ್ ಮಾಡುವ ಕೆಲಸವು ನಡೆಯುತ್ತಿದ್ದು ಜೂನ್ ಮೊದಲ ವಾರದೊಳಗೆ ಮುಂಗಾರು ಬಂದ್ರೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದರು.ಹೀಗಾಗಿ ಶೀಘ್ರ ವರುಣ ದೇವ ಕೃಪೆ ತೋರಲಿ ಎಂದು ಹೇಳುವ ಮೂಲಕ ಸದ್ಯ ಎ.ಎಂ.ಆರ್ ಮತ್ತು ಬಿಳಿಯೂರು ಡ್ಯಾಂನಲ್ಲಿರುವ ನೀರಿನ ಸಂಗ್ರಹದ ಲೆಕ್ಕಚಾರದಂತೆ ಜೂನ್ ಮೊದಲ ವಾರದವರೆಗೆ ಕುಡಿಯುವ ನೀರಿನ ಪೂರೈಕೆಯನ್ನು ಮ್ಯಾನೇಜ್ ಮಾಡಬಹುದಾಗಿದೆ.ಹೀಗಾಗಿ ನೀರನ್ನು ಗಾರ್ಡನಿಂಗ್ಗೆ, ವಾಹನ ತೊಳೆಯುವುದಕ್ಕೆ ಬಳಸಿದ್ರೆ ಅಂತವಹರ ವಿರುದ್ದ ಕ್ರಮಕ್ಕೆ ಪಾಲಿಕೆ ಮುಂದಾಗಿದೆ ಎಂದು ಹೇಳಿದ್ದಾರೆ.


