ಕಾಸರಗೋಡು : ನಾಲ್ಕು ತಿಂಗಳ ಹಿಂದೆ ಕೇರಳ ರಾಜ್ಯ ಲಾಟರಿಯಲ್ಲಿ ಪ್ರಥಮ ಬಹುಮಾನವಾಗಿ 70 ಲಕ್ಷ ರೂ.ಗಳನ್ನು ಗೆದ್ದಿದ್ದ ಯುವಕನೊಬ್ಬ ನೆಲ್ಲಿಕುಂಜೆಯ ಬೇಕರಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.
ಮೃತರು, ಬಂಗ್ರಗುಡ್ಡೆ ನಿವಾಸಿ ವಿವೇಕ್ ಶೆಟ್ಟಿ (38) ಎಂದು ತಿಳಿದು ಬಂದಿದೆ. ಶನಿವಾರ ಬೆಳಿಗ್ಗೆ ನೆಲ್ಲಿಕುಂಜೆ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ಬೆಳಿಗ್ಗೆ 10 ಗಂಟೆಯಾದರೂ ಅಂಗಡಿಯ ಶಟರ್ ಮುಚ್ಚಿದ್ದ ಕಾರಣ ಸಹೋದರ ಅನುಮಾನಾಸ್ಪದವಾಗಿ ತೆರೆದು ನೋಡಿದಾಗ ವಿವೇಕ್ ಶೆಟ್ಟಿ ನೇಣು ಬಿಗಿದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸದ್ಯ ತನಿಖೆ ನಡೆಸುತ್ತಿದ್ದಾರೆ.


