ಮಡಿಕೇರಿ : ಕಳೆದ ಎರಡು ದಶಕಗಳಿಂದ ಕೊಡಗಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಾ ಸಾಗಿರುವಂತೆಯೇ, ಇದೀಗ ಇದರೊಂದಿಗೆ ಹುಲಿ ದಾಳಿಯ ಪ್ರಕರಣಗಳು ನಿಧಾನವಾಗಿಯಾದರು ಹೆಚ್ಚುತ್ತಿದ್ದು, ಗ್ರಾಮೀಣ ಪ್ರದೇಶದ ಕೃಷಿಕ ಸಮೂಹ ಆತಂಕದ ಸುಳಿಗೆ ಸಿಲುಕಿ ಕೊಮಡಿದೆ.
ದಕ್ಷಿಣ ಕೊಡಗಿನ ನಾಗರಹೊಳೆ ಅಂಚಿನ ಗ್ರಾಮೀಣ ಭಾಗಗಳಲ್ಲಿ ಕಂಡು ಬರುತ್ತಿದ್ದ ಹುಲಿ ಹಾವಳಿ ಇದೀಗ ಜಿಲ್ಲೆಯ ವಿವಿಧೆಡೆಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ. ಕಾಡಾನೆಯ ಉಪಟಳದಿಂದ ಕೃಷಿ ಫಸಲನ್ನು ಕಳೆದುಕೊಒಡು ಕಂಗಾಲಾಗಿರುವ ಜಿಲ್ಲೆಯ ಕೃಷಿಕ ಸಮೂಹ ಇದೀಗ, ಹುಲಿ ಭೀತಿಯ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ.
ಮಡಿಕೇರಿ ತಾಲ್ಲೂಕಿನ ಕುಂಜಿಲ ಗ್ರಾಮದ ಕೈಬುಲಿರ ಕುಟುಂಬದ ತೋಟದಲ್ಲಿ ಅರೆ ಬರೆಯಾಗಿ ತಿಂದುಳಿದ ಕಾಡು ಹಂದಿಯ ದೇಹದ ಭಾಗಗಳು ಕಂಡು ಬಂದಿದೆ. ಇದು ಹುಲಿ ದಾಳಿಯಿಂದಲೆ ನಡೆದಿರಬಹುದೆನ್ನುವ ಸ್ಥಳೀಯರ ಊಹೆಗೆ ಒತ್ತು ನಿಡುವಂತೆ, ಅರಣ್ಯ ಇಲಾಖಾ ಮಂದಿಯೂ ಸ್ಥಳ ಪರಿಶೀಲನೆ ನಡೆಸಿರುವುದಾಗಿ ವರದಿಯಾಗಿದೆ.
ಈ ಎಲ್ಲಾ ಸಂಶಯಗಳ ನಡುವೆ ನೆಲಜಿ ಮತ್ತು ಕುಂಜಿಲ ಗ್ರಾಮದ ಗಡಿಯಲ್ಲಿರುವ ಅಚ್ಚಾಂಡಿರ ಹಾಗೂ ಕಲಿಯಾಟಂಡ ಕುಟುAಬಸ್ಥರ ತೋಟದ ಮಧ್ಯೆ ಬರುವ ಕೊಲ್ಲಿಯ ಬಳಿ ಇಂದು ಬೆಳಿಗ್ಗೆ ಕಾಣಿಸಿಕೊಂಡ ಹುಲಿಯೊಂದು ಕಾರ್ಮಿಕರ ದೃಷ್ಟಿಗೆ ಬಿದ್ದಿರುವುದಾಗಿ ತಿಳಿದುಬಂದಿದೆ.
ಸಿಸಿ ಕ್ಯಾಮೆರ ಅಳವಡಿಕೆ:ಅರಣ್ಯ ಇಲಾಖಾ ಅಧಿಕಾರಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಹುಲಿಯೊಂದಿಗೆ ಮರಿ ಹುಲಿ ಇರುವ ಶಂಕೆ ವ್ಯಕ್ತಪಡಿಸಿರುವುದಲ್ಲದೆ, ಹುಲಿಯ ಚಲನವಲನಗಳನ್ನು ಪತ್ತೆಗೆ ಸಿಸಿ ಕ್ಯಾಮೆರ ಅಳವಡಿಸಿವುದಾಗಿ ತಿಳಿಸಿದ್ದಾರೆಂದು ತಿಳಿದುಬಂದಿದೆ.
ಶಾಶ್ವತ ಪರಿಹಾರ ಮರೀಚಿಕೆ: ಕಾಡಾನೆ, ಹುಲಿ ಹಾವಳಿ ಸೇರಿದಂತೆ ವನ್ಯ ಮೃಗಗಳ ಹಾವಳಿಗೆ ಶಾಶ್ವತ ಪರಿಹಾರ ಎನ್ನುವುದು ಕೇವಲ ಹೇಳಿಕೆಗಳಲ್ಲಿ, ಸರ್ಕಾರದ ಆದೇಶಗಳಿಗೆಷ್ಟೆ ಸೀಮಿತವಾಗಿದೆ. ಕಾಡಾನೆ ಹಾವಳಿಗೆ ರೈಲ್ವೆ ಹಳಿ ಬೇಲಿ, ಕಂದಕಗಳ ನಿರ್ಮಾಣ ಅಲ್ಲಲ್ಲಿ ನಡೆಯುತ್ತಿದೆಯಾದರು, ಅದು ಪೂರ್ಣವಾಗಿಲ್ಲ. ಇನ್ನುಳಿದ ಪ್ರಾಣಿಗಳ ಉಪಟಳಕ್ಕೆ ಶಾಶ್ವತ ಪರಿಹಾರವೆನ್ನುವುದು ಹಾಸ್ಯಾಸ್ಪದ ವಿಚಾರವಾಗಿ ಬದಲಾಗುತ್ತಿರುವ ದೌರ್ಭಾಗ್ಯ ಜಿಲ್ಲೆಯ ಬೆಳೆಗಾರನದ್ದು. ಕಾಡುಹಂದಿ-ಮAಗಗಳ ಉಪಟಳ: ವನ್ಯ ಜೀವಿಗಳ ಉಪಟಳದ ಸರದಿ ಉದ್ದವಾಗಿ ಬೆಳೆಯುತ್ತಿದ್ದು, ಜಿಲ್ಲೆಯ ಯಾವೊಂದು ಭಾಗವು ವನ್ಯ ಜೀವಿಗಳ ಹಾವಳಿಯಿಂದ ಮುಕ್ತವಾಗಿದೆ ಎನ್ನುವಂತಿಲ್ಲ. ಅರಣ್ಯದ ಅಂಚಿನ ಭಾಗಗಳಲ್ಲಿ ಕಾಡಾನೆ, ಹುಲಿ ಹಾವಳಿ ಇದ್ದರೆ, ಉಳಿದ ಭಾಗಗಳಲ್ಲಿ ಕಾಡುಹಂದಿ, ಮಂಗಗಳ ಉಪಟಳ ಮಿತಿ ಮೀರಿದೆ. ಭತ್ತದ ಫಸಲು ಕೊಯ್ಲಿನ ಅವಧಿಯ ಈ ಅವಧಿಯಲ್ಲಿ ಕಾಡು ಹಂದಿಗಳ ಉಪಟಳ ಹೆಚ್ಚಿರುತ್ತದೆಯಾದರೆ, ಇದೇ ಅವಧಿಯಲ್ಲಿ ಮಂಗಗಳು ಕಾಫಿ ತೋಟಗಳಲ್ಲು ಬೀಡು ಬಿಟ್ಟು ಹಣ್ಣು ಕಾಫಿಯನ್ನು ಹಾಳು ಗೆಡಹಿ ಬೆಳೆಗಾರರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿವೆ.


