ಕಡಬ ; ತಹಶಿಲ್ದಾರ್ ಅವರೇ ನೀವು ಪ್ರಭಾಕರ್ ಆಗದೇ ಕಡಬದಲ್ಲಿ ಟೈಗರ್ ಪ್ರಭಾಕರ್ ಆಗಬೇಕು ಎಂದು ಕಡಬ ತಹಶಿಲ್ದಾರ್ ಅವರಿಗೆ ಮಂಗಳೂರು ಲೋಕಾಯುಕ್ತ ಎಸ್ಪಿ ಅವರು ಎಚ್ಚರಿಕೆ ಕೊಟ್ಟ ಘಟನೆ ಇಂದು ನಡೆದಿದೆ.
ಕಡಬದಲ್ಲಿ ಕರ್ನಾಟಕ ಲೋಕಾಯುಕ್ತದ ಮಂಗಳೂರು ವಿಭಾಗದ ಅಧಿಕಾರಿಗಳಿಂದ ಕಡಬ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಎಸ್ಪಿ ಸೈಮನ್ ಅವರು ಕಡಬ ತಾಲೂಕು ತಹಶಿಲ್ದಾರ್ ಪ್ರಭಾಕರ್ ಖಜೂರೆ ಅವರಿಗೆ ಈ ರೀತಿ ಹೇಳಿದ್ದಾರೆ.ಈ ವೇಳೆ ಸಾರ್ವಜನಿಕರಿಂದ ಸುಮಾರು ಐದು ದೂರುಗಳು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದೆ.
ಇದರಲ್ಲಿ ಕೆಲವು ದೂರುಗಳು ಸ್ಥಳದಲ್ಲಿಯೇ ಇತ್ಯರ್ಥ ಆಗಿದ್ದು,ಉಳಿದ ದೂರುಗಳ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ನೋಟೀಸ್ ನೀಡಲಾಗುವುದು ಎಂದು ಲೋಕಾಯುಕ್ತ ಎಸ್ಪಿ ಅವರು ಹೇಳಿದರು.
ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಉಳಿಪ್ಪು ನಿವಾಸಿ ಶಿಬು ಎಂಬವರ ಪತ್ನಿ ಸೌಮ್ಯ ಅವರು ಅಕ್ರಮ ಸಕ್ರಮ ಕಡತ ವಿಲೇವಾರಿಯಲ್ಲಿ ಅಧಿಕಾರಿಗಳಿಂದ ಆಗಿರುವ ಅನ್ಯಾಯವನ್ನು ಹೇಳಿ ಗಳಗಳನೆ ಅತ್ತು ಕಣ್ಣೀರಿಟ್ಟ ಪ್ರಸಂಗ ಕೂಡಾ ನಡೆಯಿತು. ಕಳೆದ ಎಂಟು ವರ್ಷಗಳಿಂದ ನನ್ನ ಅಕ್ರಮ ಸಕ್ರಮ ಕಡತವನ್ನು ವಿಕಲೇವಾರಿ ಮಾಡದೆ ವಿನಾಕಾರಾಣ ಸತಾಯಿಸುತ್ತಿದ್ದಾರೆ. ಕಳೆದ ವರ್ಷ ಕುಟ್ರುಪ್ಪಾಡಿಯಲ್ಲಿ ನಡೆದ ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನಾವು ದೂರು ನೀಡಿದಾಗ ಒಂದು ವಾರದೊಳಗೆ ಕಡತ ವಿಲೇವಾರಿ ಮಾಡಿ ಹಕ್ಕು ಪತ್ರ ನೀಡಬೇಕೆಂದು ಕಂದಾಯ ಅಧಿಕಾರಿಗಳಿಗೆ ಡಿ.ಸಿ ಅವರು ಸೂಚನೆ ನೀಡಿದ್ದರು. ಆದರೆ ಈವರೆಗೆ ಯಾವ ಪ್ರಕ್ರಿಯೆಯೂ ನಡೆದಿಲ್ಲ, ನನಗೆ ಎಂಟು ವರ್ಷಗಳಿಂದ ಅನ್ಯಾಯ ಮಾಡಲಾಗುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳ ಎದುರು ಕಣ್ಣೀರಿಟ್ಟು ತನ್ನ ಅಳಲು ತೋಡಿಕೊಂಡರು , ಇದರಿಂದ ಕೆಂಡಾಮಂಡಲರಾದ ಲೋಕಾಯುಕ್ತ ಅಧಿಕಾರಿಗಳು ಸ್ಥಳದಲ್ಲಿ ತಹಸೀಲ್ದಾರ್, ಉಪತಹಸೀಲ್ದಾರ್ ಅವರುಗಳನ್ನು ತೀವೃ ತರಾಟೆಗೆ ತೆಗೆದುಕೋಡು ಹದಿನೈದು ದಿನಗಳ ಒಳಗೆ ಆ ಕಡತ ವಿಲೇವಾರಿ ಮಾಡಿಕೊಡುವಂತೆ ಸೂಚನೆ ನೀಡಿದರು.
ಕಡತ ವಿಲೇವಾರಿ ಆಗದಿದ್ದರೆ ನಮಗೆ ತಿಳಿಸುವಂತೆ ಸೌಮ್ಯ ಅವರಿಗೆ ಅಭಯ ನೀಡಿದರು. ಸಾರ್ವಜನಿಕರಿಗೆ ಯಾವುದೇ ಅಧಿಕಾರಿಗಳು ಸರಿಯಾಗಿ ಸ್ಪಂದನೆ ನೀಡದೆ ಅಧಿಕಾರ ನಡೆಸದಿದ್ದರೆ. ಸರಕಾರಿ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ವಿನಕಾರಣ ತೊಂದರೆ ನೀಡಿದಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಸರಕಾರಿ ಕೆಲಸದಲ್ಲಿ ತೊಂದರೆ ನೀಡಿದರೆ ಲೋಕಾಯುಕ್ತ ಕ್ಕೆ ದೂರು ನೀಡಬಹುದು ಅದು ವಿಚಾರಣೆಗೆ ಯೋಗ್ಯವಾಗಿದ್ದಲ್ಲಿ ವಿಚಾರಣೆಗೆ ಒಳಪಡಿಸಲಗುವುದು. ಅದೇ ರೀತಿ ಜನರು ಕೂಡಾ ಹೆಚ್ಚಿನ ಸ್ಪಂದನ ಕೊಡಬೇಕು, ಇವತ್ತು ಕೇವಲ ಐದು ದೂರಗಳು ಮಾತ್ರ ಬಂದಿವೆ. ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾಯಿಸಿ ಮುಂದಿನ ಕ್ರಮ ಕೈಗೊಳ್ಳಗಾವುದು. ಇನ್ನು ಮುಂದೆ ಯಾವುದೇ ಅಧಿಕಾರಿಯಿಂದ ತೊಂದರೆಯಾದರೆ ಸಾರ್ವಜನಿಕರು ತಕ್ಷಣ ಲೋಕಾಯುಕ್ತಕ್ಕೆ ನೇರವಾಗಿ ದೂರು ನೀಡಬಹುದು, ಎಲ್ಲಾ ದೂರುಗಳಿಗೆ ಸಾಧ್ಯವಾದಷ್ಟು ಸ್ಪಂದನೆ ನೀಡಿ ಮುಂದೆ ಸೂಕ್ತ ಕ್ರಮ ಜರಗಿಸಲು ಲೋಕಾಯುಕ್ತ ಅಧಿಕಾರಿಗಳು ಬದ್ದರಾಗಿದ್ದಾರೆ ಎಂದರು.
ಸೀತಾರಾಮ ನಾಯ್ಕ್ ಹಾಗೂ ವೆಂಕಟ್ರಾಜ್ ಕೋಡಿಬೈಲು ದೂರು ನೀಡಿ ಕಡಬದಲ್ಲಿ ಕೆರೆ ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ದಾರಿ ಇಲ್ಲದಂತೆ ಮಾಡಲಾಗಿದೆ, ನಮಗೆ ನ್ಯಾಯ ಒದಗಿಸಬೇಕೆಂದು ವಿನಂತಿ ಮಾಡಿಕೊಂಡರು ಇದಕ್ಕೆ ಪ್ರತಿಕ್ರಿಯೆ ನೀಡಿದ ಲೋಕಾಯುಕ್ತ ಅಧಿಕಾರಿಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣ ಕೆರೆ ಒತ್ತುವರಿ ತೆರವು ಕಾರ್ಯ ಮಾಡಿ ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕೆಂದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಗಳಾದ ಗಾನಾ ಪಿ.ಕುಮಾರ್, ಚೆಲುವರಾಜ್, ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ಉಪತಹಸೀಲ್ದಾರ್ ಗಳಾದ ಮನೋಹರ್ ಕೆ.ಟಿ, ಗೋಪಾಲ್ ಕಲ್ಲುಗುಡ್ಡೆ, ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ, ಕಂದಾಯ ನಿರೀಕ್ಷಕ ಪೃಥ್ವಿರಾಜ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.


