ಹಾಸನ : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಎಂಟು ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ದುರ್ಮರಣಕ್ಕೀಡಾಗಿದೆ.
ಕಾಡಾನೆ ಪಾಲಾಗಿಸುವ ಕಾರ್ಯಾಚರಣೆಯಲ್ಲಿ ಅರ್ಜುನ ಆನೆಯನ್ನು ತೊಡಗಿಸಿಕೊಳ್ಳಲಾಗುತ್ತಿತ್ತು. ಈಗ ಆನೆ ಸೆರೆ ಕಾರ್ಯಾಚರಣೆ ವೇಳೆಯೇ ಹಾಸನ ಜಿಲ್ಲೆ ಎಸಳೂರು ಬಳಿ ಸೋಮವಾರ ಮಧ್ಯಾಹ್ನ ಮೃತಪಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಕಾಡಾನೆ ಹಾವಳಿ ಹೆಚ್ಚುತ್ತಿದ್ದು ಕಳೆದ ಹತ್ತು ದಿನದಿಂದ ಹಾಸನ ಜಿಲ್ಲೆಯಲ್ಲಿ ಆನೆಗಳ ಸೆರೆ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೂ ಐದು ಆನೆಗಳನ್ನು ಸೆರೆ ಹಿಡಿದಿದ್ದೇವೆ. ಎಲ್ಲಾ ಕಾರ್ಯಾಚರಣೆಯಲ್ಲಿ ಅರ್ಜುನ ಆನೆ ಇತ್ತು. ಸೋಮವಾರ ಬೆಳಗ್ಗೆ ಸಕಲೇಶಪುರ ತಾಲ್ಲೂಕು ಎಸಳೂರಿನಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ಶುರುವಾಗಿತ್ತು. ಈ ವೇಳೆ ದುರಂತ ನಡೆದಿದೆ. ಅರ್ಜುನ ಆನೆ ಮೃತಪಟ್ಟಿರುವುದು ನಿಜ ಎಂದು ಹಾಸನ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಂ.ರವಿಶಂಕರ್ ಖಚಿತಪಡಿಸಿದ್ದಾರೆ.
ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಈ ವೇಳೆ ಒಂಟಿಸಲಗದ ಜೊತೆ ಅರ್ಜುನ ಕಾಳಗಕ್ಕೆ ಇಳಿದಿದೆ. ಎರಡು ಆನೆಗಳು ಕಾಳಗಕ್ಕೆ ಬೀಳುತ್ತಿದ್ದಂತೆ ನಿಯಂತ್ರಿಸಲಾಗದೆ ಮಾವುತ ಇಳಿದು ಓಡಿದ್ದಾನೆ. ಕಾಳಗದಲ್ಲಿ ಅರ್ಜುನ ದಾರುಣವಾಗಿ ಸಾವನ್ನಪ್ಪಿದೆ.
ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅರ್ಜುನ, ಸೌಮ್ಯ ಸ್ವಾಭಾವದಿದಲೇ ಎಲ್ಲರ ಪ್ರೀತಿ ಗಳಿಸಿದ್ದ. ಅರ್ಜುನನ ಸಾವು ದುಃಖ ತರಿಸಿದೆ.


