ಸುಬ್ರಹ್ಮಣ್ಯ : ಬಿಜೆಪಿಯ ಗೃಹ ವ್ಯವಹಾರಗಳ ಸಚಿವರಾದ ಅಮಿತ್ ಷಾ ಅವರ ಪುತ್ರ ಬಿಸಿಸಿಐ ಕಾರ್ಯದರ್ಶಿ ಜಯ್ಷಾ ಇಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಶ್ರೀ ದೇವಳಕ್ಕೆ ಭೇಟಿ ನೀಡಿದ ಅವರು ದೇವರಿಗೆ ಆಶ್ಲೇಷಬಲಿ ಸೇವೆ ಸಮರ್ಪಿಸಿದರು.ಇವರೊಂದಿಗೆ ಇವರ ಪತ್ನಿ ರಿಷಿತಾ ಷಾ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮತ್ತು ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ ಮಡ್ತಿಲ ಜತೆಗಿದ್ದರು.ಶ್ರೀ ದೇವಳದ ಒಳಗೆ ಆರಂಭದಲ್ಲಿ ಸಂಕಲ್ಪ ನೆರವೇರಿಸಿ ಆಶ್ಲೇಷ ಬಲಿ ಸೇವೆ ಸಮರ್ಪಿಸಿದರು.ಬಳಿಕ ಆಶ್ಲೇಷ ಬಲಿ ಪ್ರಸಾದ ಸ್ವೀಕರಿಸಿದರು.
ನಾಗಾರಾಧನೆಗೆ ಪ್ರಸಿದ್ದಿ ಪಡೆದಿರುವ ಶ್ರೀ ದೇವಳದ ಅರ್ಚಕ ಸತ್ಯನಾರಾಯಣ ನೂರಿತ್ತಾಯರು ಜಯ್ಷಾ ಅವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿದರು.ಬಳಿಕ ಹೊಸಳಿಗಮ್ಮನ ದರುಶನ ಪಡೆದ ಅವರು ಪೂಜೆ ಸಲ್ಲಿಸಿದರು. ಬಳಿಕ ಶ್ರೀ ದೇವಳದಲ್ಲಿ ಷಾ ಕುಟುಂಬಸ್ಥರು ಪ್ರಸಾದ ಬೋಜನ ಸ್ವೀಕರಿಸಿದರು.ನಂತರ ಕೇಂದ್ರ ಗೃಹ ಮಂತ್ರಿ ಅಮಿಷಾ ಅವರ ಹೆಸರಿನಲ್ಲಿ ಶ್ರೀ ದೇವಳದಲ್ಲಿ ನಡೆಯುವ ನಿತ್ಯ ಅನ್ನ ದಾಸೋಹಕ್ಕೆ ದೇಣಿಗೆ ನೀಡಿ ಪ್ರಸಾದ ಸ್ವೀಕರಿಸಿದರು.
ಶ್ರೀ ದೇವರ ದರುಶನದಿಂದ ಅತೀವ ಸಂತಸ: ಜಯ್ಷಾ
ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಶ್ರೀ ದೇವರ ದರುಶನ ಪಡೆದುದು ಅತೀವ ಸಂತಸ ತಂದಿದೆ. ನನಗೆ ಶ್ರೀ ದೇವರ ದರುಶನ ಮಾಡಿ ಸೇವೆ ನೆರವೇರಿಸಲು ಉತ್ತಮವಾದ ವ್ಯವಸ್ಥೆ ಮಾಡಿಕೊಟ್ಟ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ, ಸದಸ್ಯರಿಗೆ ಮತ್ತು ದೇವಳದ ಆಡಳಿತ ಮಂಡಳಿಗೆ ತುಂಬು ಹೃದಯದ ಧನ್ಯವಾದಗಳು.ಮುಂದೆ ಅನೇಕ ಬಾರಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರುಶನ ಪಡೆಯುವ ಕನಸು ಹೊಂದಿದ್ದೇನೆ.ಇದನ್ನು ಶ್ರೀ ದೇವರು ನೆರವೇರಿಸುತ್ತಾರೆ ಎಂಬ ನಂಬಿಕೆ ನನ್ನದು ಎಂದು ಈ ಸಂದರ್ಭದಲ್ಲಿ ಶ್ರೀ ದೇವಳದ ಬಗ್ಗೆ ಚುಟುಕಾಗಿ ಮಾತನಾಡಿದ ಜಯ್ಷಾ ಹೇಳಿದರು.
ಗೌರವಾರ್ಪಣೆ:
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಚೇರಿಗೆ ಭೇಟಿ ನೀಡಿದ ಜಯ್ಷಾ ಅವರಿಗೆ
ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಿದರು.ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮತ್ತು ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್.ಎಸ್ ಹಾಗೂ ಮನೋಜ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್.ಟಿ ಸೂಕ್ತ ಬಂಧೋಬಸ್ತ್ ಮಾಡಿದ್ದರು.


