ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಚಿಪ್ಪಳಿ ಲಿಂಗದಹಳ್ಳಿ ಗ್ರಾಮದ ತೆರೆದ 60 ಅಡಿ ಆಳದ ಬಾವಿಗೆ ಎರಡು ವರ್ಷದ ಕಾಡುಕೋಣದ ಮರಿಯೊಂದು ಆಕಸ್ಮಿಕವಾಗಿ ಬಿದ್ದ ಘಟನೆ ನಡೆದಿದೆ.
ರಾತ್ರೆ ವೇಳೆ ಕಾಡುಕೋಣ ದಾರಿತಪ್ಪಿ ಬಂದ ಪರಿಣಾಮ ಬಾವಿಗೆ ಬಿದ್ದ ಶಂಕೆ ವ್ಯಕ್ತವಾಗಿದೆ,ಸರಿಯಾದ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು, ಕರುವಿನ ಕೋಡಿಗೆ ಹಗ್ಗ ಹಾಕಿ ಮುಳುಗದಂತೆ ಎಚ್ಚರ ವಹಿಸಿದರು. ವನ್ಯಜೀವಿ ವಿಭಾಗದ ಅರಿವಳಿಕೆ ತಜ್ಞ ಡಾ.ಮುರಳಿ ಮನೋಹರ್ ಆಗಮಿಸಿ ಕರುವಿಗೆ ಅರಿವಳಿಕೆ ನೀಡಿದ್ದು ನಂತರದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಬಾವಿಗೆ ಇಳಿದು, ಕರುವಿನ ಹೊಟ್ಟೆಗೆ ದೃಡವಾದ ಬೆಲ್ಟ್ ಬಿಗಿದ ಮೇಲೆ ಕ್ರೇನ್ ಮೂಲಕ ಕಾಡುಕೋಣದ ಕರುವನ್ನು ಯಶಸ್ವಿ ಕಾರ್ಯಾಚರಣೆಯ ಮೂಲಕ ಮೇಲಕ್ಕೆತ್ತಲಾಯಿತು.
ಈ ಸಂಧರ್ಭದಲ್ಲಿ ಕಲ್ಮನೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುರೇಶ್ ಶೆಟ್ರು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್,ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ವಲಯ ಅರಣ್ಯ ಅಧಿಕಾರಿ ಮೋಹನ್, ಉಪ ವಲಯಾರಣ್ಯಧಿಕಾರಿ ಅಶೋಕ್ ಇದ್ದರು.


