ಲಖನೌ : ದೀಪಾವಳಿ ಹಬ್ಬಕ್ಕೆ ದೀಪ ಹಾಗೂ ಮೆಣದ ಬತ್ತಿಗಾಗಿ ಏಕೆ ಅಷ್ಟೊಂದು ಹಣ ಖರ್ಚು ಮಾಡ ಬೇಕು ಎಂದು ಕೇಳುವ ಮೂಲಕ ಸಮಾಜವಾದಿ ಪಕ್ಷದ ಮುಖ್ಯಸ್ಥ, ಸಂಸದ ಅಖಿಲೇಶ್ ಯಾದವ್ ವಿವಾದ ಸೃಷ್ಟಿಸಿದ್ದಾರೆ. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ನಾನು ಯಾರಿಗೂ ಸಲಹೆ ನೀಡುವುದಿಲ್ಲ. ಆದರೆ ರಾಮನ ಹೆಸರಿನಲ್ಲಿ ಒಂದು ಸಲಹೆ ನೀಡಲು ಬಯಸುತ್ತೇನೆ ಕ್ರಿಸ್ಮಸ್ ಸಮಯದಲ್ಲಿ ಜಗತ್ತಿನಾದ್ಯಂತದ ಅನೇಕ ನಗರಗಳನ್ನು ದೀಪಗಳಿಂದ ಬೆಳಗಿಸಲಾಗುತ್ತದೆ. ಇದು ಹಲವು ತಿಂಗಳವರೆಗೂ ಮುಂದುವರಿಯುತ್ತದೆ. ಈ ವಿಷಯದಲ್ಲಿ ನಾವು ಅವರಿಂದ ಕಲಿಯಬೇಕಾಗಿದೆ. ನಾವು ಪದೇ ಪದೆ ದೀಪ ಹಾಗೂ ಮೇಣದ ಬತ್ತಿಗಳಿಗೆ ಏಕೆ ಹಣ ಖರ್ಚು ಮಾಡಬೇಕು? ಏಕೆ ಆ ಬಗ್ಗೆ ಅಷ್ಟೊಂದು ಯೋಚಿಸಬೇಕು? ಎಂದು ಪ್ರಶ್ನಿಸಿದ್ದಾರೆ.
ಯಾದವ್ ಹೇಳಿಕೆಗೆ ಬಿಜೆಪಿ ಹಾಗೂ ವಿಶ್ವಹಿಂದೂ ಪರಿಷದ್ ತೀವ್ರವಾದ ಆಕ್ಷೇಪವೆತ್ತಿದೆ. ಮಣ್ಣಿನ ಹಣತೆಗಳು ಹಾಗೂ ಕ್ಯಾಂಡಲ್ಗೆ ಖರ್ಚು ಮಾಡಬೇಡಿ, ಕ್ರಿಸ್ಮಸ್ ಹಬ್ಬದಿಂದ ಕಲಿಯಿರಿ ಎಂದು ಯಾದವ್ ಒಂದು ಶತಕೋಟಿ ಹಿಂದೂಗಳಿಗೆ ಬೋಧಿಸುತ್ತಿದ್ದಾರೆ ಎಂದೂ ಬಿಜೆಪಿ ಸಹಿತ ಸಂಘಪರಿವಾರ ಟೀಕಿಸಿದೆ.
ಈ ಸಮಾಜವಾದಿ ನಾಯಕ ಭಾರತೀಯ ಸಂಸ್ಕೃತಿಯ ವಿರುದ್ಧ ವಿದೇಶಿ ಸಂಸ್ಕೃತಿಯನ್ನು ವೈಭವೀಕರಿಸುತ್ತಿದ್ದಾರೆ. ತನ್ನನ್ನು ತಾನು ಯಾದವ್ ಎಂದು ಕರೆಸಿಕೊಳ್ಳುವ ಅವರು ಮತಾಂತರ ಗ್ಯಾಂಗ್ಗಳು ಹಾಗೂ ಜಿಹಾದಿಗಳಿಗೆ ದೇವದೂತರಾಗಿದ್ದಾರೆ. ಅವರು ಸ್ಥಳೀಯ ಹಿಂದೂ ಹಬ್ಬಕ್ಕಿಂತಲೂ ಮಿಗಿಲಾಗಿ ವಿದೇಶಿ ಹಬ್ಬವನ್ನು ಪ್ರೀತಿಸುತ್ತಿದ್ದಾರೆ ಎಂದು ದೂಷಿಸಿದೆ.


