ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅನುಪಾತದ ನಿವೇಶನಗಳ ಹಗರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅನೇಕ ಕಡತ ಕೊಂಡೊಯ್ದಿದ್ದಾರೆ. ಇದಕ್ಕೆ ಲೋಕಾಯುಕ್ತ ಅಧಿಕಾರಿಗಳೂ ಕೈ ಜೋಡಿಸಿದ್ದಾರೆಂದು ಹಗರಣ ಕುರಿತು ದೂರು ನೀಡಿರುವ ಸ್ನೇಹಮಯಿ ಕೃಷ್ಣ ಆರೋಪ ಮುಂದಿಟ್ಟಿದ್ದಾರೆ.
ಈ ಕುರಿತು ವಿವರ ನೀಡಿ, ಪ್ರಕರಣದ ತನಿಖೆಗಾಗಿ ಲೋಕಾಯುಕ್ತ ತನಿಖಾಧಿಕಾರಿಗಳು ಸರ್ಚ್ ವಾರಂಟ್ ಹೊರಡಿಸಿದ ವಿಷಯವನ್ನು ಹಿಂದಿನ ಲೋಕಾಯುಕ್ತ ಪ್ರಮುಖ ಅಧಿಕಾರಿಯೊಬ್ಬರು ಸಚಿವರ ಗಮನಕ್ಕೆ ತಂದಿದ್ದಾರೆ. ಬಳಿಕ ಈ ಎಲ್ಲಾ ಪ್ರಮುಖ ದಾಖಲೆಗಳನ್ನು ಎಲ್ಲೋ ಮುಚ್ಚಿಡಲಾಗಿದೆ.
ಈ ಪ್ರಕರಣದಲ್ಲಿ ಮೈಸೂರು ಲೋಕಾಯುಕ್ತದ ಹಿಂದಿನ ಪ್ರಮುಖ ಅಧಿಕಾರಿಯೂ ಶಾಮೀಲಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿದ್ದು ಈ ಆರೋಪಕ್ಕೆ ಪೂರಕವಾಗಿ ಕಚೇರಿಯ ಟಿಪ್ಪಣಿಯೊಂದು ತಮಗೆ ಲಭ್ಯವಾಗಿದೆ ಎಂದು ಮಾಹಿತಿ ನೀಡಿದರು. ಈ ಒಟ್ಟು ಬೆಳವಣಿಗೆಗಳಿಗೆ ಸಂಬಂದಿಸಿದ ಕಚೇರಿ ಟಿಪ್ಪಣಿಯಲ್ಲಿ ವಿವರ ವಿದೆ, ಇದರಲ್ಲಿನ ಅಂಶಗಳು ತಮ್ಮ ಆರೋಪಕ್ಕೆ ಪೂರಕವಾಗಿವೆ. ಇದೆಲ್ಲವನ್ನೂ ಗಮನಿಸಿದರೆ ಪ್ರಕರಣವನ್ನು ಹೈಕೋರ್ಟ್ ಸಿಬಿಐಗೆ ಒಪ್ಪಿಸುವ ಅನಿವರ್ಯತೆ ಸೃಷ್ಟಿಯಾಗಿದೆ, ಸಿಬಿಐ ತನಿಖೆ ನಡೆದರಷ್ಟೇ ಹಗರಣದ ಕುರಿತು ನ್ಯಾಯಯುತ ನಿರ್ಧಾರ ಸಾಧ್ಯ, ಈ ಕುರಿತು ತಮಗೆ ವಿಶ್ವಾಸವಿದೆ ಎಂದು ದೂರುದಾರ ಬಿಂಬಿಸಿದರು.


