ಮೈಸೂರು : ಒಂದೇ ಕುಟುಂಬದ ನಾಲ್ವರ ಶವ ಪತ್ತೆ ಆಗಿರುವಂತಹ ಘಟನೆ ಮೈಸೂರಿನ ಚಾಮುಂಡಿಪುರಂ ಬಡಾವಣೆಯಲ್ಲಿ ನಡೆದಿದೆ. ಮನೆಯೊಂದರಲ್ಲಿ ದಂಪತಿ ಮಹದೇವಸ್ವಾಮಿ(48), ಅನಿತಾ (35), ಪುತ್ರಿಯರಾದ ಚಂದ್ರಕಲಾ(17), ಧನಲಕ್ಷ್ಮೀ(15) ಮೃತರು. ದೊಡ್ಡ ಮಗಳು ಚಂದ್ರಕಲಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅನಿತಾ ಮೃತದೇಹ ಕುರ್ಚಿ ಮೇಲೆ, ಚಿಕ್ಕ ಮಗಳು ಕೊಠಡಿಯಲ್ಲಿ ಮತ್ತು ಮಹದೇವ ಸ್ವಾಮಿ ಶವ ಹಾಲ್ನಲ್ಲಿ ಪತ್ತೆಯಾಗಿದೆ. ಮೃತ ಮಹದೇವಸ್ವಾಮಿ ಬಂಡಿಪಾಳ್ಯದಲ್ಲಿ ಮಳಿಗೆ ಹೊಂದಿದ್ದರು.
ಮೂಲತಃ ಮೈಸೂರು ತಾಲ್ಲೂಕು ಬರಡನಪುರ ಗ್ರಾಮದವರಾಗಿದ್ದು, ಎರಡು ತಿಂಗಳ ಹಿಂದೆ ಚಾಮುಂಡಿಪುರಂ ಬಡಾವಣೆಯಲ್ಲಿ ಬಾಡಿಗೆ ಮನೆ ಪಡೆದು ಕುಟುಂಬ ವಾಸವಾಗಿತ್ತು. ಸದ್ಯ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ಕುರಿತಾಗಿ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮೈಸೂರಿನ ಬಂಡಿಪಾಳ್ಯದಲ್ಲಿ ತರಕಾರಿ ವ್ಯಾಪಾರ (Vegetable Merchant) ಮಾಡುತ್ತಿದ್ದರು. ಅವರದ್ದೇ ಸ್ವಂತ ಅಂಗಡಿ ಇತ್ತು. ಮೈಸೂರಿನ ಚಾಮುಂಡಿಪುರಂಗೆ ಎರಡು ತಿಂಗಳ ಹಿಂದೆ ಬಂದಿದ್ದರು. ಇದೀಗ ನಾಲ್ವರ ಶವ ಮನೆಯ ಒಳಗೆ ಪತ್ತೆಯಾಗಿದೆ.
ಮಗಳು ಚಂದ್ರಕಲಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ ಉಳಿದವರ ಶವಗಳು ಕೆಳಗೆ ಬಿದ್ದಿವೆ. ಇವರೆಲ್ಲಾ ಎರಡು ದಿನದ ಹಿಂದೆಯೇ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇಂದು ಶವಗಳ ಕೊಳೆತ ವಾಸನೆಯಿಂದ ಅನುಮಾನಗೊಂಡ ಅಕ್ಕಪಕ್ಕದವರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
ಕೆ.ಆರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಪೊಲೀಸರ ತನಿಖೆಯ ನಂತರವೇ ಈ ಕುಟುಂಬದ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.


