ಮೈಸೂರು : ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗೇಟ್ ಬಳಿಯಿರುವ ಫ್ರೆಂಡ್ಸ್ ಹೋಟೆಲ್ ಬಳಿ ಸ್ಪೋಟಕ ಪತ್ತೆಯಾಗಿದೆ .ಸ್ಪೋಟಕ ವಸ್ತುಗಳನ್ನು ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್ ನಲ್ಲಿ ಇಟ್ಟು ಅಪರಿಚತರು ಹೋಗಿದ್ದಾರೆಂದು ತಿಳಿದುಬಂದಿದೆ .
ಹೋಟೆಲ್ ಸಿಬ್ಬಂದಿಗಳು ಅದನ್ನು ತೆಗೆದು ನೋಡಿ ಗಾಬರಿಯಿಂದ ಪಕ್ಕದಲ್ಲಿರುವ ಮರಕ್ಕೆ ನೇತು ಹಾಕಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ . ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಬಾಂಬ್ ತಜ್ಞರು ಸ್ಪೋಟಕ ವಸ್ತುಗಳನ್ನು ಪರಿಶೀಲನೆ ನಡೆಸಿದ್ದು ಟ್ಯೂಬ್ ಆಕಾರದಲ್ಲಿರುವ 9 ಸ್ಪೋಟಕ ವಸ್ತುಗಳು ಮತ್ತು ಒಂದು ನಾಡ ಬಾಂಬ್ ಆಕಾರದ ವಸ್ತು ಪತ್ತೆಹಚ್ಚಿದ್ದಾರೆ.
ಕಳೆದ ವರ್ಷ ಮೈಸೂರು ದಸರಾ ಮೇಲೆ ಉಗ್ರರ ಕರಿ ನೆರಳು ಬಿದ್ದಿತ್ತು ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ರವಾನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಮಾಡಲಾಗಿತ್ತು.ಇದೀಗ ಸ್ಪೋಟಕ ವಸ್ತುಗಳು ಕಲ್ಲು ಗಣಿಗಾರಿಕೆಗೆ ಬಳಸಲು ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದ್ದು ನಾಡ ಬಾಂಬ್ ಕಾಡು ಪ್ರಾಣಿಗಳ ಬೇಟೆಗೆ ಬಳಸಬಹುದಾದ ಸ್ಪೋಟಕ ವಸ್ತುಗಳು ಎಂದು ಹೇಳಲಾಗುತ್ತಿದೆ. ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದವರು ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.


