ಮಂಡ್ಯ : ಇತ್ತಿಚ್ಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಇದಕ್ಕೆ ಮನುಷ್ಯನ ಮಾನಸಿಕ ಒತ್ತಡವೇ ಪ್ರಮುಖ ಕಾರಣವೆಂದು ತಜ್ಞರು ತಿಳಿಸಿದ್ದಾರೆ.ಗಂಡನ ಮನೆಯಲ್ಲಿ ಗೃಹಿಣಿಯೊಬ್ಬಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಇದಾದ ಕೆಲವೇ ಗಂಟೆಗಳಲ್ಲಿ ಗಂಡನ ಶವ ಕೂಡ ಕೆರೆಯಲ್ಲಿ ಪತ್ತೆಯಾಗಿದೆ. ಗಂಡನ ಮನೆಯ ಉಳಿದವರು ನಾಪತ್ತೆಯಾಗಿದ್ದು, ಗೃಹಿಣಿ ಸಾವಿನಿಂದ ಜನರಲ್ಲಿ ಹುಟ್ಟಿಕೊಂಡಿರುವ ಆಕ್ರೋಶದ ಪರಿಣಾಮ ಅಂಜಿ ತಲೆ ಮರೆಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಸ್ವಾತಿ (21) ಅನುಮಾನಾಸ್ಪದವಾಗಿ ಮೃತಪಟ್ಟಿರುವ ಗೃಹಿಣಿ. ಮೋಹನ್ (26) ಆತ್ಮಹತ್ಯೆ ಮಾಡಿಕೊಂಡಿರುವ ಪತಿ. ಪತ್ನಿಯ ಸಾವಿಗೆ ಹೆದರಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಸ್ವಾತಿ ಸಾವು ಆತ್ಮಹತ್ಯೆಯೋ ಕೊಲೆಯೋ ಎಂಬುದು ಖಚಿತವಾಗಿಲ್ಲ. ಇದು ಗಂಡನ ಮನೆಯವರಿಂದ ಆಗಿರುವ ಕೊಲೆ ಎಂದು ಸ್ವಾತಿ ಪೋಷಕರು ಆರೋಪಿಸಿದ್ದಾರೆ.ಆಕ್ರೋಶಗೊಂಡ ಮೃತ ಮಹಿಳೆ ಸಂಬಂಧಿಕರು ಮನೆಯ ಪೀಠೋಪಕರಣ ಧ್ವಂಸ ಮಾಡಿ ಬಳಿಕ ಮನೆಗೆ ಬೆಂಕಿ ಹಾಕಿ ದಾಂದಲೆ ಎಬ್ಬಿಸಿದ್ದರು.
ಸ್ಥಳಕ್ಕೆ ಆಗಮಿಸಿದ ಕಿಕ್ಕೇರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಾಪತ್ತೆಯಾಗಿರುವ ಗಂಡ ಹಾಗೂ ಅವನ ಮನೆಯವರಿಗಾಗಿ ಶೋಧ ಕಾರ್ಯ ನಡೆಸಿದ್ದರು.ಇಂದು ಬೆಳಿಗ್ಗೆ ಕೆರೆಯಲ್ಲಿ ಗಂಡ ಮೋಹನ್ ಶವ ಪತ್ತೆಯಾಗಿದೆ. ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆಯ ಮಾತಿನಂತೆ ದಂಪತಿಗೆ ಒಂದುವರೆ ವರ್ಷದ ಹೆಣ್ಣು ಮಗುವಿದ್ದು, ದಂಪತಿಯ ಸಾವಿನಿಂದ ಅದು ಅನಾಥವಾಗಿದೆ.


