ಮಂಗಳೂರು : 22 ವರ್ಷಗಳ ಹಿಂದಿನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ, 2003 ರಲ್ಲಿ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಅನನ್ಯ ಭಟ್ ಅವರ ತಾಯಿ ಸೋಮವಾರ ಸಂಜೆ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರನ್ನು ಭೇಟಿ ಮಾಡಿದರು.
ಎರಡು ದಶಕಗಳ ಹಿಂದೆ ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ನಿಗೂಢವಾಗಿ ಕಣ್ಮರೆಯಾಗಿದ್ದ ತನ್ನ ಮಗಳಿಗೆ ನ್ಯಾಯ ಕೋರಿ ಸುಜಾತಾ ಭಟ್ ತಮ್ಮ ಕಾನೂನು ಸಲಹೆಗಾರರೊಂದಿಗೆ ಎಸ್ಪಿಗೆ ಔಪಚಾರಿಕ ದೂರು ಸಲ್ಲಿಸಿದರು. ಧರ್ಮಸ್ಥಳದಲ್ಲಿ ಒತ್ತಡದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ವ್ಯಕ್ತಿಯೊಬ್ಬರು ಇತ್ತೀಚೆಗೆ ಎಸ್ಪಿಗೆ ಕಳುಹಿಸಿದ ಪತ್ರದ ನಂತರ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ.
ಕೆಲವು ದಿನಗಳ ನಂತರ, ಅದೇ ವ್ಯಕ್ತಿ ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರಾಗಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದು,ಧರ್ಮಸ್ಥಳದಲ್ಲಿ ಹಲವು ಮೃತದೇಹವನ್ನು ಮಣ್ಣು ಮಾಡಿದ್ದಾಗಿ ಹೇಳಿದ್ದನು.ಅದನ್ನು ಪೊಲೀಸರು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಹಲವಾರು ಸ್ಥಳಗಳಲ್ಲಿ ತಾನು ಶವಗಳನ್ನು ಹೂಳಿದ್ದೇನೆ ಮತ್ತು ತನಿಖೆ ಆರಂಭವಾದರೆ ಆ ಸ್ಥಳಗಳನ್ನು ಗುರುತಿಸಲು ಇಚ್ಛೆ ವ್ಯಕ್ತಪಡಿಸಿದ್ದೇನೆ ಎಂದು ಅವನು ಮತ್ತಷ್ಟು ಹೇಳಿದ್ದಾನೆ.
ಆ ವ್ಯಕ್ತಿಯ ಪರವಾಗಿ ನಿಂತ ಇಬ್ಬರು ವಕೀಲರು, ಆಪಾದಿತ ಸಾಮೂಹಿಕ ಅಂತ್ಯಕ್ರಿಯೆಗಳ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಬೇಕೆಂದು ಒತ್ತಾಯಿಸಿದ್ದಾರೆ. ಧರ್ಮಸ್ಥಳದಲ್ಲಿ ಕೊಲೆಗಳು ಮತ್ತು ರಹಸ್ಯ ಅಂತ್ಯಕ್ರಿಯೆಗಳ ಆರೋಪಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವ್ಯಾಪಕ ಕಳವಳವನ್ನು ಹುಟ್ಟುಹಾಕಿದ್ದು ಇದರ ಮಧ್ಯೆ, ಸುಜಾತಾ ಭಟ್ ತಮ್ಮ ಮಗಳು ಕೂಡ ೨೦೦೩ ರಲ್ಲಿ ಅದೇ ಪ್ರದೇಶದಿಂದ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದು ಮತ್ತಷ್ಟು ಪ್ರಕರಣಕ್ಕೆ ಆಶ್ಚರ್ಯಕಾರಿ ಬೆಳವಣಿಗೆ ಉಂಟುಮಾಡಿದೆ.


