Wednesday, October 22, 2025
Flats for sale
Homeಜಿಲ್ಲೆಮಂಗಳೂರು : ಯಕ್ಷಸಿರಿ ಪ್ರಶಸ್ತಿಗೆ ತೆಂಕುತಿಟ್ಟಿನ ದಿವಾಕರ್ ದಾಸ್ ಕಾವಳಕಟ್ಟೆ ಆಯ್ಕೆ.

ಮಂಗಳೂರು : ಯಕ್ಷಸಿರಿ ಪ್ರಶಸ್ತಿಗೆ ತೆಂಕುತಿಟ್ಟಿನ ದಿವಾಕರ್ ದಾಸ್ ಕಾವಳಕಟ್ಟೆ ಆಯ್ಕೆ.

ಮಂಗಳೂರು : ಕರ್ನಾಟಕ ಯಕ್ಷಗಾನ ಅಕಾಡೆಮಿಯ 2023ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ. ಪ್ರತಿಷ್ಠಿತ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ತೆಂಕುತಿಟ್ಟಿನ ಪ್ರಸಾಧನ ಕಲಾವಿದರು ಮತ್ತು ವೇಷಧಾರಿಯಾದ ದಿವಾಕರ್ ದಾಸ್ ಕಾವಳಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಶನಿವಾರ(ಸೆ.14) ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು. ನವೆಂಬರ್ ತಿಂಗಳಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಯಕ್ಷಸಿರಿ ಪ್ರಶಸ್ತಿ ಪುರಸ್ಕೃತರಿಗೆ ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದರು.

ದಿವಾಕರ್ ದಾಸ್ ಕಾವಳಕಟ್ಟೆ ಇವರ ಬಗ್ಗೆ:

ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದ ಕಾವಳಕಟ್ಟೆ ಶ್ರುತಿ ಆರ್ಟ್ಸ್ ಸಂಸ್ಥೆಯ ಸಂಸ್ಥಾಪಕ, ಯಕ್ಷಗಾನ ಕಲಾವಿದ, ಸಂಘಟಕ ದಿವಾಕರ ದಾಸ್ ಕಾವಳಕಟ್ಟೆ. ಯಕ್ಷ ಕಲೆಯನ್ನು ಅತ್ಯಂತ ಒಲವಿನಿಂದ ಮೈಗೂಡಿಸಿಕೊಂಡು ಬೆಳೆಸುತ್ತ ಬೆಳೆದವರು.

ಕಳೆದ 30 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದನಾಗಿ, ತರಬೇತುದಾರನಾಗಿ, ಯಕ್ಷಗಾನ ಸಂಘಟಕನಾಗಿ, ತಲಕಲ, ಕಾಂತಾವರ, ಸುರತ್ಕಲ್, ಮಂಗಳಾದೇವಿ ಮೇಳಗಳಲ್ಲಿ 14 ವರ್ಷ ಸ್ತ್ರೀ ವೇಷದಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 1999ರಲ್ಲಿ ಕಾವಳಕಟ್ಟೆಯಲ್ಲಿ ಶೃತಿ ಆರ್ಟ್ಸ್ ಕಲಾ ಸಂಸ್ಥೆ ಸ್ಥಾಪಿಸಿ ಕಲಾ ಪ್ರದರ್ಶನಗಳಿಗೆ ಬೇಕಾದ ವೇಷಭೂಷಣ ತಯಾರಿಸಿ, ಕರ್ನಾಟಕ ರಾಜ್ಯದ ಬಹುತೇಕ ಪ್ರಸಾದನ ಸಂಸ್ಥೆ, ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಿಗೆ ಹಾಗೂ ಕಲಾ ತಂಡಗಳಿಗೆ ವೇಷಭೂಷಣ ಒದಗಿಸಿರುವ ಇವರು ವಿದ್ಯಾರ್ಥಿಗಳಿಗೆ, ಯಕ್ಷಗಾನ ಆಸಕ್ತರಿಗೆ ನಾಟ್ಯ ಮತ್ತು ಅರ್ಥಗಾರಿಕೆಯ ತರಬೇತಿ ನೀಡಿದ್ದಾರೆ.

ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರನ್ನು ಒಟ್ಟು ಸೇರಿಸಿ ಅಲ್ಲಲ್ಲಿ ಯಕ್ಷಗಾನ, ತಾಳಮದ್ದಳೆ ಕೂಟಗಳನ್ನು ಸಂಘಟಿಸುತ್ತಿರುವ ಇವರು ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಯಕ್ಷಗಾನ ತಂಡದೊಂದಿಗೆ ಭಾಗವಹಿಸಿ ಕಲಾ ಪ್ರದರ್ಶನ, ಹಂಪಿ ಉತ್ಸವದಲ್ಲಿ ಯಕ್ಷಗಾನ ಪ್ರದರ್ಶನ, ವಿಶ್ವ ಯುವಜನ ಮೇಳದಲ್ಲಿ ಯಕ್ಷಗಾನ ಪ್ರದರ್ಶನ, ರಾಜ್ಯ ಮಟ್ಟದ ಯುವಜನ ಮೇಳಗಳಲ್ಲಿ ಯಕ್ಷಗಾನ ಪ್ರದರ್ಶನ, ಆಫ್ರೀಕಾ ಶೃಂಗಸಭೆ, ದೆಹಲಿಯಲ್ಲಿ ಯಕ್ಷಗಾನ ನೃತ್ಯ ರೂಪಕ, ಮೈಸೂರು ದಸರಾ ಉತ್ಸವಗಳಲ್ಲಿ ಯಕ್ಷಗಾನ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ್ದಾರೆ. 2014ರಲ್ಲಿ ಸರಕಾರದ ಉದ್ಯೋಗ ಖಾತರಿ ಯೋಜನೆಯ ಜಾಗೃತಿ ಯಕ್ಷಗಾನ ಪ್ರದರ್ಶನ ನೀಡಿರುವ ಇವರು ಕೆದ್ದಳಿಕೆ ಸರಕಾರಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಶಾಲೆಯನ್ನು ರಾಜ್ಯದಲ್ಲೇ ಮಾದರಿಯಾಗಿ ರೂಪಿಸುವಲ್ಲಿ ಪ್ರಯತ್ನಿಸಿದ್ದಾರೆ.

ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ರಾಜ್ಯ ಮಟ್ಟದ ಸುವರ್ಣ ಕರ್ನಾಟಕ ಸಾಧನಾಶ್ರೀ ಪ್ರಶಸ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುವರ್ಣ ಕರ್ನಾಟಕ ಜಯಂತಿ ಪ್ರಶಸ್ತಿ, ಕೆದ್ದಳಿಕೆ ಶಾಲೆಯ ಎಸ್.ಡಿ.ಎಂ.ಸಿ.ಗೆ ರಾಜ್ಯ ಮಟ್ಟದ ಉತ್ತಮ ಅಧ್ಯಕ್ಷ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ, ಉತ್ತಮ ಸ್ತ್ರೀ ವೇಷಧಾರಿ ಪ್ರಶಸ್ತಿ ಸೇರಿ ಸುಮಾರು 60ಕ್ಕೂ ಹೆಚ್ಚಿನ ಪ್ರಶಸ್ತಿಗಳು ಲಬಿಸಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular