ಮಂಗಳೂರು : ನಿಷೇಧಿತ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು ಪಜೀರ್ ಗ್ರಾಮದ ಕಂಬಳಪದವು ಬಳಿ ಎಸಿಪಿ ಧನ್ಯ ನಾಯಕ್ ಹಾಗೂ ಮಾದಕ ದ್ರವ್ಯ ನಿಗ್ರಹ ದಳದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.
ತಲಪಾಡಿಯ ಮೇರಿ ಚರ್ಚ್ ಕಾಂಪೌಂಡ್ನ ಗೌತಮ್ (22), ಕುಂಪಲದ ಹನುಮಾನ್ ದೇವಸ್ಥಾನದ ಬಳಿಯ ಕಾರ್ತಿಕ್ (27) ಮತ್ತು ತೊಕ್ಕೋಟು ಗಣೇಶ ನಗರದ ಗಣೇಶ ದೇವಸ್ಥಾನದ ಬಳಿಯ ನಿಖಿಲ್ (28) ಬಂಧಿತ ಆರೋಪಿಗಳು.
ಅಂದಾಜು 1.5 ಲಕ್ಷ ಮೌಲ್ಯದ 50 ಗ್ರಾಂ ಎಂಡಿಎಂಎ, ಮಾದಕ ವಸ್ತು ಮಾರಾಟಕ್ಕೆ ಬಳಸುತ್ತಿದ್ದ ಕಾರು, ಮೂರು ಮೊಬೈಲ್ ಫೋನ್ಗಳು, ಡಿಜಿಟಲ್ ತೂಕದ ಮಾಪಕ ಮತ್ತು ಗಾಜಿನ ಪೈಪ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 7,76,980 ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಜೀರಿನ ಕೈಗಾರಿಕಾ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಬಂದ ಆರೋಪಿಗಳು ಎಂಡಿಎಂಎಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


