ಮಂಗಳೂರು : ಇತ್ತೀಚೆಗಷ್ಟೇ 500 ನಕಲಿ ಚಿನ್ನದ ಬಳೆಗಳನ್ನು ಅಡವಿರಿಸಿಕೊಂಡು 2 ಕೋಟಿ ಸಾಲ ನೀಡಿದ ಸೇವಾ ಸಹಕಾರಿ ಬ್ಯಾಂಕ್ ನ ಮತ್ತೊಂದು ಅವ್ಯವಹಾರ ಬೆಳಕಿಗೆ ಬಂದಿದೆ. ಇದೀಗ ಮೂರು ಕೋಟಿಯ ಚೆಕ್ ನಗಧೀಕರಣ ಮಾಡಿ ಬ್ಯಾಂಕ್ ನಲ್ಲಿ ಜಮೆ ಮಾಡದ ಆರೋಪ ಎದುರಾಗಿದೆ. ನಕಲಿ ಚಿನ್ನದ ಬಳೆಯ ಹಗರಣ ಬೆಳಕಿಗೆ ಬಂದು ಕೇವಲ ಮೂರೇ ತಿಂಗಳಲ್ಲಿ ಬ್ಯಾಂಕ್ ನಲ್ಲಿ ಮತ್ತೊಂದು ಹಗರಣ ನಡೆದ ಆರೋಪ ಕೇಳಿ ಬಂದಿದೆ.
ಪಡೀಲ್ ನಲ್ಲಿ ಮುಖ್ಯ ಶಾಖೆಯನ್ನು ಹೊಂದಿರುವ ಕುಲಾಲ ಸಮೂದಾಯದ ಸಮಾಜ ಸೇವಾ ಬ್ಯಾಂಕ್ ನಲ್ಲಿ ನಕಲಿ ಚಿನ್ನದ ಬಳೆ ಅಡವಿಟ್ಟ ವಿಚಾರದಲ್ಲಿ ಬ್ಯಾಂಕ್ ಸರಫಾ ವಿವೇಕ್ ಆಚಾರ್ಯ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು. ಆದ್ರೆ ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟಿದ್ದ ಈಶ್ವರಮಂಗಲದ ಅಬೂಬಕರ್ ಸಿದ್ದೀಕ್ ಹಾಗೂ ಮತ್ತೋರ್ವ ಮಹಿಳೆಯ ಬಂಧನವಾಗಿರಲಿಲ್ಲ. ಹಾಗಂತ ಈ ಭಾರಿ ಅವ್ಯವಹಾರದಲ್ಲಿ ಭಾಗಿಯಾದ ಆರೋಪದಲ್ಲಿ ಬ್ಯಾಂಕ್ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ 28 ಜನರ ವಿರುದ್ಧ ದೂರು ದಾಖಲಾಗಿತ್ತು ಬಿಟ್ಟರೆ ಬೇರಾವ ಕಾನೂನು ಪ್ರಕ್ರಿಯೆ ನಡೆದಿರಲಿಲ್ಲ.
ಫೆಬ್ರವರಿ 8 ರಂದು ಸಮಾಜ ಸೇವಾ ಬ್ಯಾಂಕ್ ನ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲೂ ಮತ್ತದೆ ಹಳೆ ತಂಡವೇ ಪುನರಾಯ್ಕೆಗೊಂಡಿದೆ. ಆದರೆ ಆಡಳಿತ ಮಂಡಳಿ ಅಧಿಕಾರ ವಹಿಸಿ ತಿಂಗಳಾಗುವ ಮೊದಲೇ ಮತ್ತೊಂದು ಭಾರಿ ಹಗರಣದ ವಾಸನೆ ಬಂದಿದೆ. ಬ್ಯಾಂಕ್ ಅಧ್ಯಕ್ಷ ಬೋಜ ಅವರ ಹೆಸರೇ ಇದರಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದು, ಮೂರು ಕೋಟಿ ಹಣವನ್ನು ದುರುಪಯೋಗ ಮಾಡಿದ್ದಾಗಿ ಆರೋಪ ಮಾಡಲಾಗಿದೆ. ಈ ವಿಚಾರ ಸದ್ಯ ಸಮಾಜ ಸೇವಾ ಬ್ಯಾಂಕ್ ಆಡಳಿತ ಮಂಡಳಿಯ ಒಳಗೆ ಇದೆಯಾದ್ರೂ ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಸಂಘದ ಸದಸ್ಯರು ಮುಂದಾಗಿದ್ದಾರೆ.
ಇತ್ತೀಚೆಗೆ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬೋಜ ಮತ್ತು ಟೀಂ ಸಾಕಷ್ಟು ಹಣ ಖರ್ಚು ಮಾಡಿತ್ತು. ಹಲವು ಸದಸ್ಯರಿಗೆ ಕೈ ಬಿಸಿ ಮಾಡಿ ಚುನಾವಣೆ ಗೆದ್ದಿದ್ದು ಕೂಡಾ ಗೌಪ್ಯವಾಗಿ ಉಳಿದಿಲ್ಲ. ಹೊಸ ಆಡಳಿತ ಮಂಡಳಿ ಬಂದ್ರೆ ತಮ್ಮ ಬಂಡವಾಳ ಬಯಲಾಗುತ್ತದೆ ಎಂದು ಬೋಜ ಮತ್ತು ತಂಡ ಶತ ಪ್ರಯತ್ನ ನಡೆಸಿ ಚುನಾವಣೆಯಲ್ಲಿ ಗೆದ್ದು ಬೀಗಿತ್ತು. ಆದ್ರೆ ಇದೀಗ ಅಧಿಕಾರ ವಹಿಸಿ ತಿಂಗಳು ಕಳೆಯುವ ಒಳಗಾಗಿ ಮತ್ತೊಂದು ಹಗರಣದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಅಮ್ಮೆಂಬಾಳ ಬಾಳಪ್ಪ ಅವರು 1981 ರಲ್ಲಿ ಆರಂಭಿಸಿದ ಈ ಬ್ಯಾಂಕ್ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿದ್ದು ಲಾಭದಲ್ಲಿ ನಡೆಯುತ್ತಿದೆ. ಆದ್ರೆ ಸಿಗಬಾರದವರ ಕೈನಲ್ಲಿ ಸಿಕ್ಕು ಬ್ಯಾಂಕ್ ಮುಳುಗಿಸುವ ಎಲ್ಲಾ ಪ್ರಯತ್ನಗಳು ಇಲ್ಲಿ ನಡೆಯುತ್ತಿದೆ ಎಂಬುವುದೇ ಚಿಂತಿಸಬೇಕಾದ ವಿಚಾರ.
ನಕಲಿ ಚಿನ್ನದ ಬಳೆಯಲ್ಲಿ 2 ಕೋಟಿ ವಂಚನೆ..! ಈಗ 3 ಕೋಟಿ ವಂಚನೆ..! ಪಡೀಲ್ ಸಮಾಜ ಸೇವಾ ಬ್ಯಾಂಕ್ ಮುಳುಗಿಸ್ತಾ ಇದೆಯಾ ಆಡಳಿತ ಮಂಡಳಿ..!?
ಚುನಾವಣೆ ಗೆಲ್ಲಲು ನೀರಿನಂತೆ ಹಣ ಖರ್ಚು ಮಾಡಿದ್ದ ಹಳೆಯ ಆಡಳಿತ ಮಂಡಳಿ..! ಮತ್ತೆ ಗೆದ್ದು ಒಂದೇ ತಿಂಗಳಲ್ಲಿ ಮೂರು ಕೋಟಿ ಸ್ವಾಹ…?


