ಮಂಗಳೂರು : ಮಂಗಳೂರು ಕಂಬಳವು ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಮತ್ತು ಐತಿಹಾಸಿಕ ಕೋಣಗಳ ಓಟದ ಸ್ಪರ್ಧೆಯಾಗಿದೆ. ಸುಗ್ಗಿ ಕಾಲದ ನಂತರ ನಡೆಯುವ ಈ ರೋಮಾಂಚಕ ಜಾನಪದ ಕ್ರೀಡೆಯು ಭತ್ತದ ಗದ್ದೆಗಳಲ್ಲಿ ನಡೆಯುತ್ತದೆ. ಈ ಮಣ್ಣಿನ ಧಾರ್ಮಿಕ ಕಟ್ಟುಕಟ್ಟಳೆಗಳೊಂದಿಗೆ ಗ್ರಾಮೀಣ ಸೊಗಡನ್ನು ಸಾರುವ ಇಲ್ಲಿನ ಜನಜೀವನವನ್ನು ಪ್ರತಿಬಿಂಬಿಸುವ ಕೃಷಿಕ ಮತ್ತು ಜಾನುವಾರುಗಳ ಬದುಕಿನ ನಂಟಿನೊಂದಿಗೆ ಆರಂಭವಾದ ಸಾಂಪ್ರದಾಯಿಕ ಕ್ರೀಡೆಯು ಕಾಲಕ್ರಮೇಣ ಆಧುನಿಕತೆಗೆ ತೆರೆದುಕೊಳ್ಳುವ ಮೂಲಕ ವಿಶ್ವವ್ಯಾಪಿಯಾಗಿ ಇನ್ನಷ್ಟು ಜನಪ್ರಿಯವಾಗುತ್ತ ಬಂದಿದೆ. ಕಂಬಳವನ್ನು ನಿಷೇಧಿಸುವ ಮೂಲಕ ಇಲ್ಲಿನ ಮಣ್ಣಿನ ಮೂಲ ಸತ್ವಕ್ಕೆ ಕೊಡಲಿ ಏಟು ಕೊಟ್ಟು ನಮ್ಮ ಸಂಸ್ಕೃತಿಗೆ ಧಕ್ಕೆ ತರಲು ಯತ್ನಿಸಿದವರ ವಿರುದ್ಧ ನಡೆದ ಪ್ರಬಲ ಹೋರಾಟದಲ್ಲಿ ಹುಟ್ಟಿಕೊಂಡ ಕಿಚ್ಚು ‘ಮಂಗಳೂರು ಕಂಬಳ’ವು ಇಂದು ನವೋತ್ಸಾಹದ ೯ನೇ ವರ್ಷಕ್ಕೆ ಹೆಜ್ಜೆಯನ್ನಿರಿಸಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ರವರು ತಿಳಿಸಿದ್ದಾರೆ.
ಈ ಕಾರ್ಯಕ್ರಮ ದ ಉದ್ಘಾಟನೆ ಡಿ. 27 ರಂದು ಶನಿವಾರ ಬೆಳಿಗ್ಗೆ 8.30 ಕ್ಕೆ ನಡೆಯಲಿದೆ.ಬಳಿಕ ಸಭಾ ಕಾರ್ಯಕ್ರಮ ಸಂಜೆ 6.೦೦ ಘಂಟೆಗೆ ನಡೆಯಲಿದೆ. 28 ರಂದು ರವಿವಾರ ಬಹುಮಾನ ವಿತರಣೆ ನಡೆಯಲಿದೆ.
ಮಂಗಳೂರು ಕಂಬಳಕ್ಕೆ 9 ವರ್ಷ ಪೂರೈಸಿದ ಹಿನ್ನಲೆಯಲ್ಲಿ ನವ ವರುಷ ನವ ವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
1. ರಾಣಿ ಅಬ್ಬಕ್ಕ – ಚಾರಿತ್ರಿಕ ಚಿತ್ರಕಲಾ ಪ್ರದರ್ಶನ – ಪೋರ್ಚುಗೀಸರ ವಿರುದ್ಧ ದಿಟ್ಟತನದಿಂದ ಹೋರಾಟ ಮಾಡಿದ ತೌಳವ ಮಣ್ಣಿನ ಹೆಮ್ಮೆಯ ರಾಣಿ “ರಾಣಿ ಅಬ್ಬಕ್ಕ” ರವರ ಚಾರಿತ್ರಿಕ ಚಿತ್ರಕಲಾ ಪ್ರದರ್ಶನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಪ್ರೊ. ತುಕರಾಮ ಪೂಜಾರಿಯವರ ಸಹಯೋಗದಿಂದ ನಡೆಯಲಿದೆ.
2 ವಂದೇ ಮಾತರಂ 150 – ಸಾಮೂಹಿಕ ಗೀತ ಗಾಯನ – ಭಾರತ ಸ್ವಾತಂತ್ರದ ಧ್ಯೇಯ ಮಂತ್ರ ವಂದೇ ಮಾತರಂ ಗೀತೆಗೆ 150 ವರ್ಷ ಪೂರೈಸಿದ ಹಿನ್ನಲೆಯಲ್ಲಿ 150 ವಿದ್ಯಾರ್ಥಿನಿಯರಿಂದ ವಂದೇ ಮಾತರಂ ಸಾಮೂಹಿಕ ಗೀತ ಗಾಯನ – ಬೆಳಿಗ್ಗೆ 8.3೦ಕ್ಕೆ ನಡೆಯಲಿದೆ.
3.ಮಂಗಳೂರು ಕಂಬಳ ಪ್ರಶಸ್ತಿ 2015 – ಉದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ‘ಬ್ಯಾಕ್ ಟು ಊರು’ ಪರಿಕಲ್ಪನೆಗೆ ಶಕ್ತಿ ತುಂಬುತ್ತಿರುವ 9 ಮಂದಿಗೆ ಮಂಗಳೂರು ಕಂಬಳ ಪ್ರಶಸ್ತಿ 2015 ನೀಡಿ ಗೌರವಿಸಲಾಗುವುದು.
4. ಏಕ್ ಪೇಡ್ ಮಾ ಕೆ ನಾಮ್ – ತಾಯಿಯ ಹೆಸರಿನಲ್ಲಿ ಒಂದು ಗಿಡ – ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನವ ಸಂಕಲ್ಪಗಳಲ್ಲಿ ಒಂದಾಗಿರುವ ‘ಏಕ್ ಪೇಡ್ ಮಾ ಕೆ ನಾಮ್ – ತಾಯಿಯ ಹೆಸರಿನಲ್ಲಿ ಒಂದು ಗಿಡ’ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
5. ವಿಶೇಷ ಸಾಮರ್ಥ್ಯ ಹಾಗೂ ಓಲ್ಡ್ ಏಜ್ಡ್ ಹೋಮ್ನಲ್ಲಿ ನೆಲೆಸಿರುವ ಮಂಗಳೂರು ನಗರ ಪರಿಸರದ ನಿವಾಸಿಗಳನ್ನು ಕರೆತಂದು ಕಂಬಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು.
6. ರಂಗ್ದ ಕೂಟ – ಹೆಸರಿನಲ್ಲಿ ಚಿತ್ರಕಲಾ ಸ್ಪರ್ಧೆಯು ರಂಗ್ದ ಕಿನ್ಯ, ರಂಗ್ದ ಎಲ್ಯ, ರಂಗ್ದ ಮಲ್ಲ ಹಾಗೂ ರಂಗ್ದ ಕೂಟ ವಿಭಾಗಗಳಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.3೦ರ ತನಕ ನಡೆಯಲಿರುತ್ತದೆ..
7. ಮಂಗಳೂರು ಕಂಬಳ ರೀಲ್ಸ್ – ಮಂಗಳೂರು ಕಂಬಳದ ಕ್ಷಣಗಳನ್ನು ರೀಲ್ಸ್ ಮಾಡುವ ಮೂಲಕ ಅತೀ ಹೆಚ್ಚು ವೀಕ್ಷಣೆ ಪಡೆಯುವ ರೀಲ್ಸ್ ಗೆ ಬಹುಮಾನವನ್ನು ನೀಡಲಾಗುವುದು.
8. ಮಂಗಳೂರು ಕಂಬಳ ಫೋಟೊಗ್ರಾಫಿ – ಫೋಟೋಗ್ರಾಫಿ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, ನುರಿತ ತೀರ್ಪುಗಾರರ ಮೂಲಕ ಆಯ್ಕೆಯಾದ ಚಿತ್ರಕ್ಕೆ ನಗದು ಬಹುಮಾನ ನೀಡಲಾಗುವುದು.
9. ಎಐ ಕ್ರಿಯೇಟಿವ್ ಎಡಿಷನ್ – ಕೃತಕ ಬುದ್ಧಿಮತ್ತೆ (ಎಐ) ಉಪಯೋಗಿಸಿ ಮಂಗಳೂರು ಕಂಬಳ ಕಲಾಕೃತಿಯ ರಚಿಸುವ ಸ್ಪರ್ಧೆ ನಡೆಯಲಿದ್ದು ಉತ್ತಮ ಕಲಾಕೃತಿಗೆ ಬಹುಮಾನ ನೀಡಲಾಗುವುದು.


