ಮಂಗಳೂರು : ಇಂದು ಬೆಳಗ್ಗೆ 10:00 ಗಂಟೆ ಸುಮಾರಿಗೆ 65 ವರ್ಷದ ಮಹಿಳೆಯೊಬ್ಬರು ಮಗಳೊಂದಿಗೆ ಸುರತ್ಕಲ್ಗೆ ತೆರಳುತ್ತಿದ್ದ ವೇಳೆ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಮೃತರನ್ನು ಈರಮ್ಮ ಎಂದು ಗುರುತಿಸಲಾಗಿದೆ.ಕೆಎ 19 ಎಎ 2519 ನೋಂದಣಿ ಸಂಖ್ಯೆ ಹೊಂದಿರುವ ಖಾಸಗಿ ಬಸ್ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ.
ಚಾಲಕನ ಮುಂದಿನ ಸೀಟಿನಲ್ಲಿ ಕುಳಿತ ಈರಮ್ಮ ತನ್ನ ಮಗಳೊಂದಿಗೆ ಪ್ರಯಾಣಿಸುತ್ತಿದ್ದಳು. ಜೋಕಟ್ಟೆ ಕ್ರಾಸ್ ಬಳಿಯ ಸರ್ವೀಸ್ ಸ್ಟೇಷನ್ ನಲ್ಲಿ ಬಸ್ ಚಾಲಕ ಅನಿಲ್ ಜಾನ್ ಲೋಬೋ ಎಂಬಾತ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಹಠಾತ್ ನಿಲ್ಲಿಸಿದ ಪರಿಣಾಮ ಈರಮ್ಮ ಬಸ್ಸಿನಿಂದ ಹೊರ ಬಿದ್ದಿದ್ದು ದುರದೃಷ್ಟವಶಾತ್ ಬಸ್ಸಿನ ಹಿಂದಿನ ಎಡ ಚಕ್ರವು ಈರಮ್ಮನ ಮೇಲೆ ಚಲಿಸಿದ ಪರಿಣಾಮ ತಲೆಗೆ ತೀವ್ರ ಗಾಯವಾಗಿದ್ದು ಮತ್ತು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದಿದೆ.
ಈ ಬಗ್ಗೆ ಉತ್ತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2024 ರಲ್ಲಿ ಐಪಿಸಿ ಕಲಂ 304 ಎ ಮತ್ತು 279 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ


