ಮಂಗಳೂರು : ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳಕ್ಕೆ ಪರಾರಿಯಾಗಿದ್ದ ಎ1 ಆರೋಪಿ ಆಯಿಷಾ ಅಲಿಯಾಸ್ ರೆಹಮತ್, A5 ಆರೋಪಿ ಶೊಹೇಬ್ ಮತ್ತು ಸಿರಾಜ್ ಎಂಬುವವರನ್ನು ಇಂದು(ಮಂಗಳವಾರ) ಕಲ್ಲಡ್ಕ ಬಳಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಲಿ ನಾಪತ್ತೆಯಾದ ನಂತರ ರೆಹಮತ್ ಕೇರಳಕ್ಕೆ ಪರಾರಿಯಾಗಿದ್ದ ಎನ್ನಲಾಗಿದೆ. ಆಕೆಯನ್ನು ಬಂಟ್ವಾಳದ ಕಲ್ಲಡ್ಕ ಬಳಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಎಂದು ಪರಿಗಣಿಸಲಾದ ಅಬ್ದುಲ್ ಸತ್ತಾರ್ (ಎ2) ನನ್ನು ಬಂಧಿಸಲು ಸಿಸಿಬಿ ಕಾರ್ಯಾಚರಣೆಯನ್ನು ಆರಂಭಿಸಿದೆ.
ಮುಮ್ತಾಜ್ ಆಲಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮಹಿಳೆಯನ್ನು ಉಪಯೋಗಿಸಿ ಮಾಡಿದ ಬ್ಲ್ಯಾಕ್ ಮೇಲ್ ಕಾರಣ ಎಂದು ಅಲಿ ಕುಟುಂಬಸ್ಥರು ಆರೋಪಿಸಿದ್ದರು. ಈ ಬಗ್ಗೆ ಮುಮ್ತಾಜ್ ಅಲಿ ತಮ್ಮ ಹೈದರ್ ಅಲಿ ಕಾವೂರು ಪೊಲೀಸ್ ಠಾಣೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಆರು ಮಂದಿಯ ಮೇಲೆ ದೂರು ನೀಡಿದ್ದರು. ರೆಹಮತ್ ಅಲಿಯಾಸ್ ಆಯಿಷಾ ಎಂಬ ಮಹಿಳೆಯನ್ನು ಬಳಸಿಕೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ. ಆರು ಮಂದಿಯ ತಂಡ ಬ್ಲ್ಯಾಕ್ ಮೇಲ್ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಕಾವೂರು ಠಾಣೆಯಲ್ಲಿ ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ,ಶೋಯೆಬ್ ಮತ್ತು ಮುಮ್ತಾಜ್ ಅಲಿ ಕಾರು ಚಾಲಕ ಸಿರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಕುರಿತು ತನಿಖೆ ಕೈಗೊಂಡಿದ್ದ ಮಂಗಳೂರು ಸಿಸಿಬಿ ಪೊಲೀಸರು ಇಂದು ಮೂವರನ್ನು ಬಂಧಿಸಿದ್ದಾರೆ. ಸಧ್ಯ ಪ್ರಕರಣದ ಮಾಸ್ಟರ್ಮೈಂಡ್ ಆಗಿರುವ ಎ2 ಆರೋಪಿ ಅಬ್ದುಲ್ ಸತ್ತಾರ್ಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.


