ಮಂಗಳೂರು : ಸಕಲೇಶಪುರದ ಎಡಕುಮೇರಿ ಮತ್ತು ಕಡಗರವಳ್ಳಿ ನಡುವಿನ ದೋಣಿಗಲ್ನಲ್ಲಿ ಭೂಕುಸಿತದಿಂದ ಸ್ಥಗಿತಗೊಂಡಿರುವ ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಆಗಸ್ಟ್ 8ರ ನಂತರವೇ ಪುನರಾರಂಭಗೊಳ್ಳಲಿದೆ ಎಂದು ಮೈಸೂರು ರೈಲ್ವೆ ವಿಭಾಗ ತಿಳಿಸಿದೆ.
ಜುಲೈ 27 ರಂದು ಭೂಕುಸಿತದಿಂದಾಗಿ ಹಳಿಗಳ ಮೇಲೆ ಪರಿಣಾಮ ಬೀರಿದ್ದರಿಂದ ಕರ್ನಾಟಕದ ಕರಾವಳಿ ಮತ್ತು ರಾಜಧಾನಿ ನಗರಗಳ ನಡುವೆ 12 ರೈಲುಗಳ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು.
ರೈಲ್ವೆ ಅಧಿಕಾರಿಗಳು, “ಗುಡ್ಡ ಜರಿದ ಸ್ಥಳದ ಪಕ್ಕದಲ್ಲಿ ರಿಟೈನರ್ ವಾಲ್ ನಿರ್ಮಾಣ ಕಾರ್ಯವು ಅತಿ ವೇಗದಲ್ಲಿ ನಡೆಯುತ್ತಿದೆ. ಟ್ರ್ಯಾಕ್ ಕಂಡೀಷನಿಂಗ್ ಕೆಲಸ ಬಹುತೇಕ ಪೂರ್ಣಗೊಂಡಿದೆ. ಗೂಡ್ಸ್ ರೈಲುಗಳನ್ನು ಪ್ರಾಯೋಗಿಕ ಆಧಾರದ ಮೇಲೆ ದುರಸ್ತಿ ಮಾಡಿದ ಹಳಿಯಲ್ಲಿ ಓಡಿಸಲಾಗುತ್ತದೆ. ಆದಾಗ್ಯೂ, ಪ್ಯಾಸೆಂಜರ್ ರೈಲಿಗೆ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲಾಗುತ್ತಿದೆ. ಆದ್ದರಿಂದ ಆಗಸ್ಟ್ 8 ರವರೆಗೆ ಮಂಗಳೂರು ಮತ್ತು ಬೆಂಗಳೂರು ನಡುವೆ ಯಾವುದೇ ರೈಲು ಸೇವೆ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


