ಬೇಲೂರು : ಬಿಕ್ಕೋಡು ಸಮೀಪ ಬೆಳಂ ಬೆಳಗ್ಗೆ 40 ಕಾಡಾನೆಗಳ ಹಿಂಡು ಪ್ರತ್ಯಕ್ಷ ಜೀವ ಭಯದಲ್ಲಿ ಸಾರ್ವಜನಿಕರು ಕಾಡಾನೆಗಳ ಸ್ಥಳಾಂತರ ಮಾಡುವಂತೆ ಬೆಳೆಗಾರರ ಪ್ರತಿಭಟನೆ.
ತಾಲೂಕಿನ ಮಲೆನಾಡು ಭಾಗವಾದ ಬಿಕ್ಕೋಡಿನ ಕಾಫಿ ಎಸ್ಟೇಟ್ ತೋಟ ಒಂದರಲ್ಲಿ ಬೀಡು ಬಿಟ್ಟಿರುವ 40 ಕ್ಕೂ ಹೆಚ್ಚು ಕಾಡಾನೆಗಳ ಗುಂಪು ಹಗಲು ರಾತ್ರಿ ಎನ್ನದೆ ಬಿಕ್ಕೋಡು ಸೋಮನಹಳ್ಳಿ ನಿಡುಮನಹಳ್ಳಿ ಕೋಡಿಹಳ್ಳಿ ಗ್ರಾಮಗಳಲ್ಲಿ ಕಳೆದ ಒಂದು ವಾರಗಳಿಂದ ಫಸಲಿಗೆ ಬಂದಿರುವ ಕಾಫಿ ಅಡಿಕೆ ಬಾಳೆ ತೋಟ ಹಾಗೂ ಜೋಳ ರಾಗಿ ಹೊಲಗಳ ಮೇಲೆ ದಾಳಿ ನಡೆಸಿ ತಿಂದು ತುಳಿದು ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡಿರುವುದಲ್ಲದೆ ದಾರಿಹೋಕರು ಹಾಗೂ ರೈತರನ್ನು ಅಟ್ಟಾಡಿಸಿರುವ ಪ್ರಕರಣ ಬುಧವಾರ ಬೆಳಂ ಬೆಳಗ್ಗೆ ಬೆಳಕಿಗೆ ಬಂದಿದೆ.
ಬಿಕೋಡು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಸೇರಿ ಇಂದು ಕಾಡಾನೆಯಿಂದ ತೀವ್ರತರವಾಗಿ ನೊಂದಿರುವುದನ್ನು ಖಂಡಿಸಿ ಅರಣ್ಯ ಇಲಾಖೆ ಸ್ಥಳಕ್ಕೆ ಬರುವಂತೆ ಪ್ರತಿಭಟನೆ ನಡೆಸಿದರು ಕೂಡಲೆ ಹಿರಿಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಸ್ಥಳೀಯ ರೈತರು ಹಾಗೂ ಕೂಲಿ ಕಾರ್ಮಿಕರು ಹಾಸನ ಹಾಗೂ ಬಿಕ್ಕೋಡು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಭೋಗ ಮಲ್ಲೇಶ್ ರವರು ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ಒಂದು ತಿಂಗಳಿಂದ ಪ್ರತಿಭಟನೆ ಹಾಗೂ ಮನವಿ ಪತ್ರ ಸಲ್ಲಿಸಿದರು ಕ್ರಮ ಕೈಗೊಳ್ಳುತ್ತಿಲ್ಲ ಕಾಫಿ ಹಾಗೂ ಜೋಳದ ಬೆಳೆಗಳು ಕಟಾವಿಗೆ ಬಂದಿದ್ದು ಆನೆಗಳ ಓಡಾಟಕ್ಕೆ ಹೆದರಿ ರೈತರು ಬೆಳೆಗಾರರು ಹಾಗೂ ಕಾರ್ಮಿಕರು ಕಂಗಲಾಗಿದ್ದಾರೆ ದಿನನಿತ್ಯ ರಾತ್ರಿ ಹಗಲು ಎನ್ನದೆ ಫಸಲಿಗೆ ಬಂದಿರುವ ಬೆಳೆಗಳನ್ನು ನಾಶ ಮಾಡುವುದಲ್ಲದೆ ಮನುಷ್ಯರನ್ನು ಕಂಡರೆ ಕಾಡಾನೆಗಳು ಘೀಳಿನ ಮೂಲಕ ಸದ್ದು ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಯ ಹುಟ್ಟಿಸಿದೆ.
ಸರ್ಕಾರ ಭರವಸೆ ನೀಡುವುದನ್ನು ಬಿಟ್ಟು ರೈತರ ಕಾರ್ಮಿಕರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯ ಪಡಿಸಿದರು ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್ ರವರು ಬಿಕ್ಕೋಡು ಸುತ್ತಮುತ್ತ ೪೦ ಕಾಡಾನೆಗಳು ಬೀಡು ಬಿಟ್ಟಿವೆ ಕಾಡಾನೆಗಳನ್ನು ಸೆರೆ ಹಿಡಿಯುವ ಹಾಗೂ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆಯನ್ನು ಎರಡು ಅಥವಾ ಮೂರು ದಿನಗಳಲ್ಲಿ ಪ್ರಾರಂಭ ಮಾಡಲು ಸರ್ಕಾರ ಆದೇಶ ನೀಡಿದೆ ದಸರಾ ಆನೆಗಳು ಬರುವುದು ತಡವಾದ ಕಾರಣ ಕಾರ್ಯಾಚರಣೆ ವಿಳಂಬ ವಾಗಿದೆ ಈಗಾಗಲೇ ದುಬಾರೆ ಯಿಂದ ೮ ಆನೆಗಳನ್ನು ಕಾರ್ಯಾಚರಣೆಗೆ ಕರೆತರಲು ಹಿರಿಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಲಾಗಿದೆ ವಾಟೇ ಹಳ್ಳ ಮೀಸಲು ಅರಣ್ಯ ಪ್ರದೇಶದಲ್ಲಿ ಆನೆಗಳು ವಾಸ್ತವ ಹೂಡಲಿದ್ದು ತ್ವರಿತವಾಗಿ ಕಾರ್ಯಾಚರಣೆ ಆರಂಭವಾಗಲಿದೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು .


