ಬೆಳ್ತಂಗಡಿ : ಅರಣ್ಯದಲ್ಲಿ ಸಾಮೂಹಿಕವಾಗಿ ಮೃತದೇಹಗಳನ್ನು ಹೂತು ಹಾಕಿರುವ ಕುರಿತ ಆರೋಪಗಳು ಆಧಾರರಹಿತ ಮತ್ತು ಸುಳ್ಳಿನಿಂದ ಕೂಡಿದ್ದಾಗಿವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.
ಪ್ರಕರಣದ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿ ಸಿರುವ ಡಾ| ಹೆಗ್ಗಡೆಯವರು, ಸತ್ಯಾಂಶಗಳನ್ನು ಬೆಳಕಿಗೆ ತರಲು ನಡೆಸಲಾಗುತ್ತಿರುವ ಎಸ್ಐಟಿ ತನಿಖೆಯನ್ನು ತಾವು ಸ್ವಾಗತಿಸುವುದಾಗಿ ಹೇಳಿದ್ದಾರೆ. ಮಂಗಳವಾರ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಕ್ತರನ್ನು ದಾರಿ ತಪ್ಪಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಈ ಆರೋಪಗಳನ್ನು ಮಾಡಲಾಗಿದೆ. ಇದರಿಂದ ತೀವ್ರ ನೋವುಂಟಾಗಿದೆ. ಆರೋಪಗಳ ಕುರಿತ ತನಿಖೆಗಾಗಿ ರಾಜ್ಯ ಸರಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದಾಗಲೇ ಅದನ್ನು ಸ್ವಾಗತಿಸಿದ್ದೇನೆ. ಸತ್ಯ ಎಲ್ಲರಿಗೂ ತಿಳಿಯಲು ಅದಷ್ಟು ಬೇಗೆ ತನಿಖೆ ಪೂರ್ಣಗೊಳ್ಳಲಿ. ನಾವು ನಮ್ಮ ಎಲ್ಲ ದಾಖಲೆಗಳನ್ನು ತೆರೆದಿಟ್ಟಿದ್ದೇವೆ ಎಂದರು.
ಶ್ರೀ ಕ್ಷೇತ್ರದ ಬಗೆಗಿನ ಅಪಪ್ರಚಾರದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬ ಬಗೆಗೆ ನಮ್ಮ ಮೂಲಗಳಿಂದ ನಾವು ತಿಳಿದುಕೊಂಡಿದ್ದೇವೆ. ಆದರೆ ಈ ಬಗ್ಗೆ ಹೆಚ್ಚೇನೂ ಹೇಳಲಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಈ ಎಲ್ಲ ಷಡ್ಯಂತ್ರಗಳನ್ನು ಬಯಲು ಮಾಡಲಿದೆ ಎಂದು ಹೇಳಿದರು.
ತನಿಖೆಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧರಿದ್ದೇವೆ ಎಂದಿದ್ದು ಧರ್ಮಸ್ಥಳದಲ್ಲಿ ಯಾವುದೇ ಅಕ್ರಮ ಚಟುವಟಿಕೆ ಗಳು ನಡೆಯುತ್ತಿಲ್ಲ. ಎಲ್ಲ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಗಳು ಟ್ರಸ್ಟ್ ಅಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ನಮ್ಮ ಕುಟುಂಬದ ಒಡೆತನದ ಅಸ್ತಿ ಬಹಳ ಕಡಿಮೆಯಿದೆ. ಹೆಚ್ಚಿನ ಆಸ್ತಿಯು ಟ್ರಸ್ಟ್ನದ್ದಾಗಿದೆ. ಅದಕ್ಕೆ ದಾಖಲೆಗಳಿವೆ. ಕಳೆದ 14 ವರ್ಷಗಳಿಂದ ಧರ್ಮ ಸ್ಥಳದ ವಿರುದ್ದ ಅತ್ಯಂತ ವ್ಯವಸ್ಥಿತವಾಗಿ ಅಪಪ್ರಚಾರ ನಡೆಯುತ್ತಿದ್ದರೂ ನಾವು ಅಚಲವಾಗಿ ನಮ್ಮ ಸಮಾಜ ಸೇವೆಯನ್ನು ಮುಂದುವರಿಸಿದ್ದೇವೆ ಎಂದರು.
ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಲಾಗಿದೆ. ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಹೆಗ್ಗಡೆಯವರು, ಈ ಆರೋಪಗಳು ಸುಳ್ಳು ಧರ್ಮಸ್ಥಳದಲ್ಲಿ ನಿಧನ ಹೊಂದಿದವರು ಮೋಕ್ಷವನ್ನು ಪಡೆಯುತ್ತಾರೆ ಎಂಬ ಜನಪ್ರಿಯ ನಂಬಿಕೆ ಇದೆ.