ಬೆಳ್ತಂಗಡಿ ; ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೆಲಂತಬೆಟ್ಟು ಎಂಬಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದ ಜಾಗಕ್ಕೆ ತಾಹಶೀಲ್ದಾರ್ ಹಾಗೂ ಬೆಳ್ತಂಗಡಿ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ ಘಟನೆ ವರದಿಯಾಗಿದೆ.
ಸ್ಥಳದಲ್ಲಿ ಸ್ಪೋಟಕಗಳನ್ನು ಬಳಸಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ಮಾಡುತ್ತಿದ್ದ ಆರೋಪಿ ಬಿಜೆಪಿಯ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಸೇರಿಂದತೆ ಹಲವರನ್ನು ಬಂಧಿಸಿದ್ದಾರೆ. ಬೆಳ್ತಂಗಡಿ ಶಾಸಕರ ಆಪ್ತರಾಗಿರುವ ಶಶಿರಾಜ್ ಶೆಟ್ಟಿ ಹಾಗೂ ದಿಡುಪೆಯ ಪ್ರಮೋದ್ ಎಂಬವರು ಈ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ತನ್ನ ಆಪ್ತ ಶಶಿರಾಜ್ ಬಂಧನದ ವಿಚಾರ ತಿಳಿದ ಶಾಸಕ ಹರೀಶ್ ಪೂಂಜಾ ಠಾಣೆಗೆ ಆಗಮಿಸಿ ಬಂಧಿತರನ್ನು ಬಿಡುಗಡೆ ಮಾಡಲು ಒತ್ತಾಯಿಸಿದ್ದಾರೆ. ಆದ್ರೆ ಶಾಸಕರ ಒತ್ತಾಯಕ್ಕೆ ಮಣಿಯದ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಹರೀಶ್ ಪೂಂಜಾ ರಾತ್ರಿ ಇಡೀ ಠಾಣೆಯ ಬಾಗಿಲಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದಾದ ಬಳಿಕ ನಮ್ಮ ಸರ್ಕಾರ ಬಂದಾಗ ನೋಡಿಕೊಳ್ಳುವುದಾಗಿ ಹೇಳಿ ಶಾಸಕರು ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶಶಿರಾಜ್ ಶೆಟ್ಟ ಅವರನ್ನು ರಾತ್ರಿ ವೇಳೆ ಮನೆಗೆ ನುಗ್ಗಿ ಬಂಧಿಸಲಾಗಿದ್ದು, ಪೊಲೀಸರು ಕಾಂಗ್ರೆಸ್ ಎಂಜಟರಂತೆ ವರ್ತಿಸಿದ್ದಾರೆ ಎಂದು ಶಾಸಕ ಪೂಂಜಾ ಆರೋಪಿಸಿದ್ದಾರೆ.
ಆದರೆ ಯಾವುದೇ ದಾಖಲೆ ಇಲ್ಲದೆ ಸ್ಪೋಟಕಗಳನ್ನು ಬಳಸಿ ಅಕ್ರಮವಾಗಿ ಕಲ್ಲಿನ ಗಣಿಗಾರಿಕೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದು, ಸ್ಥಳದಿಂದ ಆರೋಪಿಗಳಿಗೆ ಸೇರಿದ ಹಿಟಾಚಿ, ಕಂಪ್ರೆಸರ್, ಕಾರು ಹಾಗೂ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


