ಬೆಳಗಾವಿ : ಬೈಲಹೊಂಗಲ ಪಟ್ಟಣದ ಹೃದಯ ಭಾಗದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರಮುಖ ಉದ್ಯಾನ ನಿರ್ವಹಣೆಯ ಕೊರತೆಯಿಂದ ಸೊರಗಿದೆ.
ದಿನದಿಂದ ದಿನಕ್ಕೆ ಅವಸಾನದ ಅಂಚಿನತ್ತ ಸಾಗಿದ ಉದ್ಯಾನ.ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿರುವ ರಾಯಣ್ಣನ ಉದ್ಯಾನ ಕಾಯಕಲ್ಪಕ್ಕೆ ಕಾದಿದೆ. ಉದ್ಯಾನದ ಪ್ರಮುಖ ಗೇಟ್, ಜಾರು ಬಂಡಿ ಹಾಳಾಗಿದೆ. ಮಕ್ಕಳ ಆಟಿಕೆಗಳು ತುಕ್ಕು ಹಿಡಿದಿವೆ. ಉಯ್ಯಾಲೆಯ ಸರಪಳಿ ಶಿಥಿಗೊಲಗೊಂಡಿವೆ. ಹಸಿರು ಹುಲ್ಲು ವನಗಿದೆ. ವಿದ್ಯುತ್ ದೀಪದ ಕೊರತೆ, ಆಸನಗಳು, ಕುಡಿಯುವ ನೀರಿನ ಸೌಲಭ್ಯ ಇಲ್ಲದಂತಾಗಿದೆ. ವಿಶ್ರಾಂತಿ ಪಡೆಯಲು ಉದ್ಯಾನಕ್ಕೆ ಬರುವ ನಾಗರಿಕರು ವಿದ್ಯುತ್ ಶಾಕ್ ನಿಂದ ತೊಂದರೆ ಅನುಭವಿಸಿದ ಘಟನೆಗಳು ಸಂಭವಿಸಿವೆ. ಉದ್ಯಾನದಲ್ಲಿ ವಿದ್ಯುತ್ ಕಂಬದಲ್ಲಿನ ವಿದ್ಯುತ್ ತಂತಿಗಳು ಹೊರ ಬಂದಿದ್ದು ನಾಗರಿಕರಿಗೆ ಅಪಾಯಕಾರವಾಗಿದೆ. ಸರಿಯಾದ ವಿದ್ಯುತ್ ವ್ಯವಸ್ಥೆ ಇಲ್ಲದೆ ಕತ್ತಲೆಯಲ್ಲಿ ನಾಗರಿಕರು ಉದ್ಯಾನಕ್ಕೆ ಬರುವಂತಾಗಿದೆ.
ಉದ್ಯಾನದಲ್ಲಿ ಶುದ್ಧ ಕುಡಿಯುವ ನೀರು, ಆಸನಗಳು, ಮಕ್ಕಳ ಆಟಿಕೆ ವಸ್ತುಗಳು, ಜಾರು ಬಂಡಿ, ಉಯ್ಯಾಲೆಗಳು ಸುಸಜ್ಜಿತವಾಗಿ ನಿರ್ಮಾಣಗೊಳ್ಳಬೇಕಿದೆ. ಸರಿಯಾದ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಉದ್ಯಾನವನದಲ್ಲಿ ಖಡ್ಗದಾರಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡುವಂತೆ ರಾಯಣ್ಣನ ಅಭಿಮಾನಿಗಳು ಸಾಕಷ್ಟು ಹೋರಾಟ ಮಾಡಿದ್ದಾರೆ. ಆದರೆ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನನೆಗುದ್ದಿಗೆ ಬಿದ್ದಿದೆ ಎನ್ನುತ್ತಾರೆ ರಾಯಣ್ಣ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ರಾಜು ಸೊಗಲ, ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ.


