ಬೆಂಗಳೂರು : 5, 8 ಮತ್ತು 9ನೇ ತರಗತಿಯ ಬೋರ್ಡ್ ಪರೀಕ್ಷೆ ರಾಜ್ಯಾದ್ಯಂತ ನಿನ್ನೆಯಿಂದ ಆರಂಭಗೊಂಡಿದ್ದು, ಸದ್ಯ ಆ ಪರೀಕ್ಷೆಗಳನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸಿದೆ. ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಸುಪ್ರೀಂ ಗೆ ರೂಪ್ಸ ಹಾಗೂ ಅವರ್ ಸ್ಕೂಲ್ಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಪುರಸ್ಕರಿಸಿದ್ದು, ಪರೀಕ್ಷೆ ನಡೆಸದಂತೆ ತಡೆ ನೀಡಿದೆ.
ಸೋಮವಾರ ಮೊದಲ ದಿನದ ಪ್ರಥಮ ಭಾಷೆ ಕನ್ನಡ ಭಾಷಾ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಮಂಗಳವಾರ ಎರಡನೇ ದಿನ ದ್ವಿತೀಯ ಭಾಷೆ ಇಂಗ್ಲೀಷ್ ಭಾಷಾ ಪರೀಕ್ಷೆ ಕೂಡ ನಡೆದಿದೆ. ಬೋರ್ಡ್ ಪರೀಕ್ಷೆ ವಿಚಾರವಾಗಿ ಸರ್ಕಾರದ ಸುತ್ತೋಲೆ ರದ್ದು ಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿತ್ತು. ಇದನ್ನು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ವಿಭಾಗೀಯ ಪೀಠ ಏಕಸದಸ್ಯ ಪೀಠ ಆದೇಶ ರದ್ದು ಮಾಡಿ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿತ್ತು. ಇದನ್ನು ಪ್ರಶ್ನಿಸಿ ರುಪ್ಸಾ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು.ಇದೀಗ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠದ ಆದೇಶಕ್ಕೆ ತಡೆ ನೀಡಿದ್ದು, ಮೇಲ್ಮನವಿ ಅರ್ಜಿಯ ಸಂಪೂರ್ಣ ವಾದ ಮಂಡಿಸಿ ತೀರ್ಪು ನೀಡುವವರೆಗೂ ಬೋರ್ಡ್ ಎಕ್ಸಾಂ ನಡೆಸಬಾರದು ಎಂದು ಹೇಳಿದೆ.
ನ್ಯಾಯಮೂರ್ತಿ ಬೇಲಾ ತ್ರಿವೇದಿ ಹಾಗೂ ನ್ಯಾ.ಪಂಕಜ್ ಮಿತ್ತಲ್ ಅವರಿಂದ ನ್ಯಾಯಪೀಠ ಹೈಕೋರ್ಟ್ ವಿಭಾಗೀಯ ಪೀಠ ಮೇಲ್ಮನವಿ ಅರ್ಜಿಯ ಅಂತಿಮ ತೀರ್ಪು ನೀಡುವವರೆಗೂ ಬೋರ್ಡ್ ಎಕ್ಸಾಂಗೆ ಬ್ರೇಕ್ ನೀಡಿ ಆದೇಶಿಸಿದೆ. ಈ ನಡುವೆ ಪರೀಕ್ಷೆಗೆ ತಯಾರಾದ ವಿದ್ಯಾರ್ಥಿಗಳು ದಿಗಿಲುಬಡಿದಂತಾಗಿದ್ದಾರೆ.