ಬೆಂಗಳೂರು : ಯಾವುದೇ ಸಿದ್ಧಾಂತಗಳ ಜೊತೆಗೆ ಸಂಬಂಧವಿಲ್ಲದ ಬೆರಳೆಣಿಕೆಯಷ್ಟು ಜನ ತಮ್ಮ ಸ್ವಾರ್ಥಕ್ಕಾಗಿ, ಸುಳ್ಳು ಜಾಲಗಳನ್ನು ನಿರ್ಮಿಸುವ ಮೂಲಕ ಇಡೀ ದೇಶವನ್ನು ವಿಘಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಎಚ್ಚರಿಸಿದ್ದಾರೆ.
ಸಂಸ್ಕಾರಭಾರತಿ ವತಿಯಿಂದ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿ ಆಯೋಜಿಸಲಾದ 4 ದಿನಗಳ ಅಖಿಲ ಭಾರತೀಯ ಕಲಾಸಾಧಕ ಸಂಗಮದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ನಿರರ್ಥಕ ವಿವಾದಗಳಲ್ಲಿ ಮುಳುಗಿರುವದರಿಂದ ಕಲೆಯ ವಿಮರ್ಶೆ ಕಲೋನ್ಮುಖವಾಗಿಲ್ಲ. ವಿಮರ್ಶೆ ಅಸ್ತಿತ್ವಕ್ಕಾಗಿ ಜಗತ್ತಿನಲ್ಲಿ 2000 ವರ್ಷಗಳಲ್ಲಿ ನಡೆದ ಸಂಘರ್ಷದಲ್ಲಿ ಶಕ್ತಿಶಾಲಿಗಳು ಗೆಲ್ಲುತ್ತಾರೆ ಎನ್ನುವುದು ಸಾಬೀತಾಗಿದೆ. ಈ ವಿಮರ್ಶೆಯನ್ನೇ ಹೇಗಾದರೂ ಉಳಿಸಬೇಕೆಂದಿರುವ ವರ್ಗ ಸಮಾಜದಲ್ಲಿ ವಿಭಜನೆ ಮಾಡುತ್ತದೆ ಎಂದರು.
ಇಂದಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಅದೆಷ್ಟೋ ಕಪೋಲಕಲ್ಪಿತ ಸುದ್ದಿಗಳು ಪ್ರಸಾರವಾಗುತ್ತಿದೆ.ಆದರೆ ಅವುಗಳಿಗೆ ಕಡಿವಾಣ ಹಾಕುವವರು ಯಾರು ಎಂದುನಿಶ್ಚಯವಾಗಿಲ್ಲ. ಕಡಿವಾಣ ಹಾಕುವ ವ್ಯಕ್ತಿ ನಿಶ್ಚಯವಾಗದೆ ಕೆಲಸವಾಗುವುದಿಲ್ಲ.ಸ್ಥಾನಮಾನದ ಪ್ರತಿಷ್ಠೆ ಇಲ್ಲದೆ ಈ ಕೆಲಸವನ್ನು ಮಾಡುವವನು ಕಾರ್ಯಕರ್ತ. ಹಾಗಾಗಿ ನಮ್ಮ ಕೆಲಸಕ್ಕೆ ಕಾರ್ಯಕರ್ತರ ಅಗತ್ಯತೆ ಇದೆ ಎಂದರು.ಭಾರತೀಯ ಕಲೆಗಳ ಆದರ್ಶ ಸತ್ಯಂ ಶಿವಂ ಸುಂದರಆ ಆಧಾರಿತವಾಗಿ ಜಗತ್ತಿನಲ್ಲಿ ಭಾರತೀಯ ಕಲಾ ವಿಮರ್ಶೆಯನ್ನು ಸ್ಥಾಪಿಸಬೇಕಾಗಿದೆ. ಕಲೆಯ ಮೂಲಕ ಕಲ್ಯಾಣ, ಸಮತ್ವ, ಸಾಮರಸ್ಯ ಸ್ಥಾಪಿಸುವವರ ವಿಮರ್ಶೆ ಜಗತ್ತಿನಲ್ಲಿ ಪ್ರಭಾವಿಯಾಗುವ ಮೂಲಕ ಭಾರತವನ್ನು ವಿಮರ್ಶೆಯ ಲೋಕದಲ್ಲಿ ಪ್ರಭಾವಿಯನ್ನಾಗಿಸಬೇಕು. ಇದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಸಂಸ್ಕಾರ ಭಾರತಿ ಕಲಾಜಗತ್ತಿನಲ್ಲಿ ಸಮರ್ಥವಾದ ಸ್ಥಾನವನ್ನು ಪಡೆದಿದೆ. ಅದರ ಕಾರ್ಯಾರಂಭದ ಹಿಂದಿನ ಘನ ಉದ್ದೇಶವನ್ನು ಸಾಧಿಸುವ ಮಾರ್ಗಗಳು ಹಲವು. ಆದರೆ ದಿಕ್ಕು ಬದಲಾಗುವುದಿಲ್ಲ. ಈಶ್ವರನ ವರವಾದ ಕಲೆ ಒಂದು ಪ್ರತಿಭೆ. ಅದನ್ನು ಪ್ರಸ್ತುತಿಪಡಿಸುವ ಅಗತ್ಯತೆ ಇದೆ. ಆದರೆ ಕೇವಲ ಸ್ತುತಿಗಾಗಿ ಬಳಕೆಯಾಗಬಾರದು ಎಂಬ ಎಚ್ಚರಿಕೆಯೂ ಅತ್ಯಗತ್ಯ ಎಂದು ಭಾಗವತ್ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ್ ಗುರೂಜಿ, ನಮ್ಮ ಸಂಸ್ಕೃತಿ ಪುರಾತನವಾದದ್ದು. ಹಾಗಾಗಿ ಅದನ್ನು ಸನಾತನ ಎಂದು ಕರೆಯಲಾಗುತ್ತದೆ. ಆದರೆ, ನಾವು ಸಂಘಟಿತರಾಗಿರಲಿಲ್ಲ. ಇಡೀ ದೇಶದಲ್ಲಿ ಪರ್ಯಟನೆ ಮಾಡಿ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸಿ ದೇಶವನ್ನು ಸಂಘಟಿಸುವ ಪ್ರಯತ್ನವನ್ನು ಆದಿಶಂಕರಾಚಾರ್ಯರು ಮಾಡಿದ್ದರು. ಈಗ ಆ ಒಗ್ಗೂಡಿಸುವ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತಿಯ ಅಖಿಲ ಭಾರತಿಯ ಅಧ್ಯಕ್ಷ ವಾಸುದೇವ್ ಕಾಮತ್, ಉಪಾಧ್ಯಕ್ಷ ಮೈಸೂರು ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಅಶ್ವಿನ್ ದಳ್ವಿ,ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಡಾ. ಮನಮೋಹನ್ ವೈದ್ಯ, ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ವಿಗ್ರಹವನ್ನು ರೂಪಿಸಿದ ಶಿಲ್ಪಿ ಅರುಣ್ ಯೋಗಿರಾಜ್, ಶಿಲ್ಪಿ ಜಿ.ಎಲ್.ಭಟ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


