ಬೆಂಗಳೂರು : ನಾವೆಲ್ಲ ಒಂದಾಗಿ ಒಗ್ಗಟ್ಟಿನಿಂದ ದೇಶಕ್ಕೆ ಕೊಡುಗೆ ನೀಡಿದಾಗ ಮಾತ್ರ ಭಾರತ ವಿಶ್ವಗುರುವಾಗಲೂ ಸಾಧ್ಯ. ಯಾವುದೋ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡರೆ ಅದು ಸಾಧ್ಯವಾಗುವುದಿಲ್ಲ. ಕೇಂದ್ರ ಸರ್ಕಾರದ ಸರಕಾರದ ತಾರತಮ್ಯ ನೀತಿಯನ್ನು ಸಂವಿಧಾನದಡಿಯಲ್ಲಿ ಸೋಲಿಸಬೇಕಿದೆ. ಅದಕ್ಕಾಗಿ ಅಲ್ಪಸಂಖ್ಯಾತರೆಲ್ಲರೂ ಒಟ್ಟಾಗಿ, ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಶಾಸಕ ರಿಜ್ವಾನ್ ಅರ್ಷದ್ ಕರೆ ನೀಡಿದರು.
ನಗರದ ದೇವರಾಜ್ ಅರಸ್ ಭವನದಲ್ಲಿ ಗುರುವಾರ ನಡೆದ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಂವಿಧಾನ ಬದ್ಧವಾಗಿ ರಚನೆಯಾದ ಕೇಂದ್ರ ಸರ್ಕಾರ ತಾರತಮ್ಯದ ನೀತಿಯನ್ನು ಮುಂದುವರಿಸಿದೆ. ಸAವಿಧಾನವನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆಯದೇ ಬೇರೆ ಯಾರೇ ಬರೆದಿದ್ದರೂ ಇಷ್ಟೊತ್ತಿಗಾಗಲೇ ಅದನ್ನು ಬದಲಾಯಿಸಿ ಬಿಡುತ್ತಿದ್ದರು. ಅಂತಹ ಮನಸ್ಥಿತಿಗಳು ಇಂದು ನಮ್ಮನ್ನು ಆಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿಕೊಂಡಿರುವ ಕೇಂದ್ರ ಸರ್ಕಾರ, ಸಂವಿಧಾನ ಬದ್ಧ ಹಕ್ಕುಗಳನ್ನು ಕಸಿದುಕೊಂಡು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡುವ ಪ್ರಯತ್ನದಲ್ಲಿ ನಿರತವಾಗಿದೆ. ಅಲ್ಪಸಂಖ್ಯಾತರು ತಮ್ಮ ಹಕ್ಕಿಗಾಗಿ ಮಾತನಾಡುವ ಮುಸಲ್ಮಾನನ್ನು ಜಿಹಾದಿ ಎಂದು ನಿಂದಿಸಿದರೆ, ಸಿಖ್ ಹೋರಾಟಗಾರರನ್ನು ಖಾಲಿಸ್ತಾನಿಗಳೆಂದು ಜರಿಯುತ್ತಿದೆ. ಈ ಎಲ್ಲ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಹಿಂದೂ ಸಹೋದರರನ್ನು ನಗರ ನಕ್ಸಲ್ರೆಂದು ಕುಗ್ಗಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ೯ ಜನ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಅಲ್ಪಸಂಖ್ಯಾತರ ಹಕ್ಕುಗಳ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹ್ಮದ್, ಬೆಂಗಳೂರಿನ ಕ್ರಿಸ್ಮಿನ್ ಧರ್ಮಗುರು ರೆ.ಡಾ. ಪೀಟರ್ ಮಚಾಡೊ, ಆಯೋಗದ ಕಾರ್ಯದರ್ಶಿ ಡಾ. ಮಾಝುದ್ದೀನ್ ಖಾನ್, ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಇದ್ದರು.


